ಬೆಳಗಾವಿ: ಸುವರ್ಣ ವಿಧಾನ ಸೌಧದಲ್ಲಿನ ಸ್ವಚ್ಛತೆ ವಿಚಾರವಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಗರಂ ಆಗಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ಸೌಧದಲ್ಲಿ ಇಂದು ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಪತಿ ಪರಿಶೀಲನೆ ನಡೆಸಿದರು.
ಸುವರ್ಣ ವಿಧಾನಸೌಧದ ಒಳಗೆ ಗೋಡೆಗಳ ಸ್ವಚ್ಛತೆ ಕಾಪಾಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ಖಾದರ್, ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಗೆ ತರಾಟೆಗೆತ್ತಿಕೊಂಡರು.
ಏನ್ರೀ ನಿಮ್ಮ ಮನೆಯಾಗಿದ್ರೆ ಹೀಗೆ ಇಟ್ಟುಕೊಳ್ಳುತ್ತಿದ್ರಾ ಎಂದು ಗರಂ ಆದ ಖಾದರ್, ಸುವರ್ಣ ವಿಧಾನಸೌಧದ ನಿರ್ವಹಣೆಗಾಗಿಯೇ ವರ್ಷಕ್ಕೆ ಆರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದು 120 ಕ್ಕೂ ಅಧಿಕ ಕಾರ್ಮಿಕರು ಸ್ವಚ್ಛತೆಗಾಗಿ ಇರುವಾಗ ಏನು ಮಾಡ್ತಿದ್ದೀರಿ ಎಂದು ತರಾಟೆಗೆತ್ತಿಕೊಂಡಿದ್ದಾರೆ.
2016-17 ರಲ್ಲಿ ಬಣ್ಣ ಹಚ್ಚಿದ್ದೇವೆ ಎಂದು ಈ ವೇಳೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಪೀಕರ್ ಗೆ ಸಮರ್ಥನೆ ಕೊಟ್ಟಿದ್ದಾರೆ.