ಉಳ್ಳಾಲ:ಉಳ್ಳಾಲ ಭಾಗಕ್ಕೆ ನಟ ಸೋನು ಸೂದ್ ಫೌಂಡೇಷನ್ ನಿಂದ ಕೊಡುಗೆಯಾಗಿ ನೀಡಿದ ಆಮ್ಲಜನಕ ಘಟಕದ ಯಂತ್ರವನ್ನು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಬರಮಾಡಿಕೊಳ್ಳಲಾಯಿತು.
ಯಂತ್ರವನ್ನು ಬರಮಾಡಿಕೊಂಡ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರರವರು ಮಾತನಾಡಿ , ‘ಸೋನು ಸೂದ್ ಫೌಂಡೇಷನ್ ಮತ್ತು ಜಿಲ್ಲಾಡಳಿತ ಶೇ 75-25 ರ ಅನುದಾನ ವಿನಿಯೋಗಿಸಿಕೊಂಡು ಘಟಕ ಸ್ಥಾಪನೆ ಮಾಡುತ್ತಿದೆ. ಸೋನು ಸೂದ್ ಫೌಂಡೇಷನ್ ₹ 46 ಲಕ್ಷ ಹಾಗೂ ಜಿಲ್ಲಾಡಳಿತ ₹ 12.88 ಲಕ್ಷ ಘಟಕಕ್ಕೆ ವಿನಿಯೋಗಿಸಿದೆ. ಜಿಲ್ಲೆಗೆ ನೀಡಿರುವ ಪ್ರಥಮ ಯೋಜನೆ ಇದಾಗಿದ್ದು,ಜನತೆಗೆ ಬಹಳಷ್ಟು ಅನುಕೂಲವಾಗಿದೆ ಎಂದು ಹೇಳಿದರು.
30ರಿಂದ 40 ಸಿಲಿಂಡರ್ ಆಮ್ಲಜನಕ ಇಲ್ಲಿ ಉತ್ಪಾದನೆಯಾಗಲಿದ್ದು, ಉಳ್ಳಾಲ ಭಾಗದ ಜನತೆಗೆ ಮುಂದಿನ ದಿನಗಳಲ್ಲಿ ಹೊರಗಿನಿಂದ ಆಮ್ಲಜನಕ ತರುವಂತಹ ಅವಶ್ಯಕತೆ ಇರುವುದಿಲ್ಲ. ಜಿಲ್ಲಾಡಳಿತ ವತಿಯಿಂದ ಆರೋಗ್ಯ ಇಲಾಖೆ ಘಟಕ ನಿರ್ಮಾಣ ಮಾಡಲಿದೆ. ಜಿಲ್ಲಾಡಳಿತದ ವತಿಯಿಂದ ಸೋನು ಸೂದ್ ಅವರಿಗೆ ಧನ್ಯವಾದಗಳು’ ಎಂದು ಹೇಳಿದರು.
ಸೋನು ಸೂದ್ ಫೌಂಡೇಷನ್ ಸದಸ್ಯ ಶ್ರೀಪ್ರಸಾದ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಪಾಧ್ಯಕ್ಷ ಐಯೂಬ್ ಮಂಚಿಲ, ಉಳ್ಳಾಲ ನಗರಸಭೆ ಕಮೀಷನರ್ ರಾಯಪ್ಪ, ಆರೋಗ್ಯ ಅಧಿಕಾರಿ ರವಿಕೃಷ್ಣ, ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾ ಸಾಗರ್, ಡಾ.ಪ್ರಶಾಂತ್ ,ಸಮುದಾಯ ಆರೋಗ್ಯ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಮುಸ್ತಾಫ ಅಬ್ದುಲ್ಲಾ, ಸಮಿತಿ ಸದಸ್ಯರಾದ ರಿಚರ್ಡ್ ಡಿಸೋಜ, ರವಿ ಗಾಂಧಿನಗರ, ಸತ್ಯವತಿ ಬಸ್ತಿಪಡ್ಪು, ನಗರಸಭೆ ಸದಸ್ಯರಾದ ಜಬ್ಬಾರ್ ಮೇಲಂಗಡಿ, ಭಾರತಿ ಎಂ., ಇಬ್ರಾಹಿಂ ಅಶ್ರಫ್, ಅಝೀಝ್ ಕೋಡಿ, ಮುಖಂಡರಾದ ಈಶ್ವರ್ ಉಲ್ಳಾಲ್, ಪ್ರವಿನ್ ತೊಕ್ಕೊಟ್ಟು, ಅಬ್ದುಲ್ ರೆಹಮಾನ್ ಮೇಲಂಗಡಿ, ಯು.ಎಂ ಮನ್ಸೂರ್, ಯುಉ.ಎ ಇಸ್ಮಾಯಿಲ್,ಡಾ.ತಾರಾ, ಡಾ.ಶಶಿಕಲಾ ಉಪಸ್ಥಿತರಿದ್ದರು.