ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ , ಧರ್ಮಾಧಿಕಾರಿ, ಹಾಗೂ ಸಂಸ್ಥೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಬರವಣಿಗೆ ಮತ್ತು ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿರುವ ಸೋಮನಾಥ್ ನಾಯಕ್ ಅವರಿಗೆ ಮೂರು ತಿಂಗಳ ಸಜೆ ಹಾಗೂ 4.5 ಲಕ್ಷ ಪರಿಹಾರ ನೀಡಲು ಕೋರ್ಟ್ ಆದೇಶ ಮಾಡಿದೆ. ಈ ಹಿನ್ನೆಲೆ ಸೋಮನಾಥ್ ನಾಯಕ್ ಇಂದು ಸಂಜೆ 3 ಗಂಟೆಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದು ನ್ಯಾಯಾಧೀಶರ ಮುಂದೆ ಶರಣಾಗಲಿದ್ದಾರೆ ಎನ್ನಲಾಗಿದೆ. ಬಳಿಕ ಬೆಳ್ತಂಗಡಿ ಪೊಲೀಸರು ಅವರನ್ನು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಇದರ ಸಂಸ್ಥೆಗಳ ಕುರಿತು ಗೌರವಕ್ಕೆ ಚ್ಯುತಿ ತರುವಂತ ಯಾವುದೇ ರೀತಿಯಲ್ಲಿ ಬರವಣಿಗೆ ಅಥವಾ ಹೇಳಿಕೆ ನೀಡಬಾರದೆಂದು ಬೆಳ್ತಂಗಡಿ ನ್ಯಾಯಾಲಯ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸೋಮನಾಥ್ ನಾಯಕ್ ಸೇರಿದಂತೆ ಐದು ಜನರಿಗೆ ಆದೇಶ ಮಾಡಿತ್ತು. ಆದ್ರೆ ಅದನ್ನು ಮೀರಿ ಮತ್ತೆ ಸೋಮನಾಥ್ ನಾಯಕ್ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿರುವುದಕ್ಕಾಗಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಸೋಮನಾಥ್ ನಾಯಕ್ ದೋಷಿ ಎಂದು ಪರಿಗಣಿಸಿ ಮೂರು ತಿಂಗಳ ಸಜೆ ಮತ್ತು 4.5 ಲಕ್ಷ ಪರಿಹಾರ ನೀಡಬೇಕೆಂದು ಆದೇಶ ಮಾಡಿತ್ತು. ಅದಲ್ಲದೆ ಸೋಮನಾಥ್ ನಾಯಕ್ ಸೇರಿದ ಆಸ್ತಿ ಸಹ ಮುಟ್ಟುಗೋಲು ಹಾಕಿಕೊಂಡಿತು.
ಬೆಳ್ತಂಗಡಿ ನ್ಯಾಯಾಲಯದ ಆದೇಶ ವಿರುದ್ಧ ಸೋಮನಾಥ್ ನಾಯಕ್ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯಲ್ಲಿ , ಹೈಕೋರ್ಟ್ , ಸುಪ್ರೀಂ ಕೋರ್ಟ್ ಗಳಲ್ಲಿ ವಕೀಲರ ಮೂಲಕ ಅಪೀಲು ಸಲ್ಲಿಸಿದ್ದರು. ಆದ್ರೆ ಎಲ್ಲಾ ನ್ಯಾಯಾಲಯದಲ್ಲಿ ಅಪೀಲನ್ನು ವಜಾ ಮಾಡಿ ಬೆಳ್ತಂಗಡಿ ನ್ಯಾಯಾಲಯ ಮೊದಲು ನೀಡಿದ್ದ ಅದೇಶವನ್ನು ಎತ್ತಿಹಿಡಿದಿದೆ.
ಇನ್ನೂ ಸೋಮನಾಥ್ ನಾಯಕ್ ಅವರ ಪರ ವಕೀಲರಾದ ಭಾಸ್ಕರ್ ಹೊಳ್ಳ ಅವರು ಶನಿವಾರ ಬೆಳ್ತಂಗಡಿ ಕೋರ್ಟ್ ಗೆ ಸೋಮವಾರ ಮೂರು ಗಂಟೆಗೆ ನ್ಯಾಯಾಧೀಶರ ಮುಂದೆ ಸೋಮನಾಥ್ ನಾಯಕ್ ಶರಣಾಗತಿ ಆಗುತ್ತಿದ್ದಾರೆ ಎಂಬ ಬಗ್ಗೆ
ಅರ್ಜಿ ಕೂಡ ಸಲ್ಲಿಸಿದ್ದಾರೆ.