ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಅರಂತೊಟ್ಟು ಎಂಬಲ್ಲಿ ಅಪರೂಪದ ಸಾರಿಬಳ ಹಾವು ಪತ್ತೆಯಾಗಿದ್ದು ಇದನ್ನು ಹಿಡಿದು,ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಅರಂತೊಟ್ಟು ನಿವಾಸಿ ದೀಪಕ್ ಎಂಬುವರ ಮನೆಯಲ್ಲಿ ಸುಮಾರು 5 ಅಡಿ ಉದ್ದದ ಸಾರಿಬಾಳ ಹಾವು ಕೋಳಿಮರಿಯನ್ನು ನುಂಗುತ್ತಿದ್ದ ವೇಳೆ ಅದನ್ನು ಕಂಡ ಮನೆಯವರು ಉರಗತಜ್ಞ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ತಕ್ಷಣ ಅದನ್ನು ರಕ್ಷಿಸಿದ್ದಾರೆ.
ಫೋರೆಸ್ಟನ್ಸ್ ಬೆಕ್ಕು ಹಾವು (ಸಾರಿಬಳ) ಹೆಚ್ಚಾಗಿ ಗುಜರಾತ್, ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ ಕಾಡುಗಳಲ್ಲಿ ಕಂಡು ಬರುತ್ತದೆ. ಇವು ಜನವಸತಿ ಪ್ರದೇಶದಲ್ಲಿ ಕಂಡುಬರುವುದು ತೀರಾ ವಿರಾಳ. ರಾತ್ರಿ ಸಮಯ ಹೆಚ್ಚಿನ ಸಂಚಾರ ನಡೆಸುವ ಇವುಗಳ ಪ್ರಮುಖ ಆಹಾರ ಸಣ್ಣ ಪಕ್ಷಿ, ಮೊಟ್ಟೆ, ಇಲಿ,ಬಾವಲಿ ಇತ್ಯಾದಿ.
ಇವುಗಳಲ್ಲೂ ಎರಡು ಪ್ರಭೇದಗಳಿದ್ದು ಬೂದು ಬಣ್ಣ ಹಾಗೂ ಕಪ್ಪು ಚುಕ್ಕೆ, ಇನ್ನೊಂದು ಪ್ರಭೇದ ಕಪ್ಪು ಚುಕ್ಕೆಗಳೊಂದಿಗೆ, ತಿಳಿಕೆಂಪು, ಕಂದು ಬಣ್ಣವನ್ನು ಹೊಂದಿರುತ್ತದೆ. ಕೊಯ್ಯೂರಿನಲ್ಲಿ ಈ ಪ್ರಭೇದದ ಹಾವು ಕಂಡುಬಂದಿದೆ. ತನ್ನ 11 ವರ್ಷಗಳ ಹಾವು ಹಿಡಿಯುವ ಸೇವೆಯಲ್ಲಿ ಇದುವರೆಗೆ ಬೂದು ಬಣ್ಣದ ಸಾರಿಬಾಳ ಎರಡು ಬಾರಿ ಹಾಗೂ ತಿಳಿ ಕೆಂಪು ಕಂಡು ಕಂದು ಬಣ್ಣದ ಹಾವು ಇದೇ ಮೊದಲ ಬಾರಿ ಕಂಡು ಬಂದಿದೆ ಎಂದು ಅಶೋಕ್ ಅವರು ತಿಳಿಸಿದ್ದಾರೆ.
ಇವು ವಿಷ ರಹಿತ ಹಾವುಗಳಾಗಿದ್ದು ಕಟ್ಟು ಹಾವನ್ನು ಹೋಲುವುದರಿಂದ ಇವು ಕಂಡು ಬಂದಲ್ಲಿ ಜನರು ಕೊಲ್ಲಲು ಮುಂದಾಗುತ್ತಾರೆ. ಎಲ್ಲ ಜೀವಿಗಳಂತೆ ಹಾವುಗಳಿಗೂ ಬದುಕುವ ಹಕ್ಕಿದ್ದು ಯಾವುದೇ ಹಾವು ಕಂಡು ಬಂದರೆ ಅವುಗಳನ್ನು ರಕ್ಷಿಸುವುದು ಅತಿ ಅಗತ್ಯ ಎಂದು ಸ್ನೇಕ್ ಅಶೋಕ್ ತಿಳಿಸಿದ್ದಾರೆ.