ಬೆಂಗಳೂರು: ಬೈಯಪ್ಪನಹಳ್ಳಿ ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೇ ಟರ್ಮಿನಲ್ ನಲ್ಲಿ ಸೋಮವಾರದಿಂದ ರೈಲು ಸಂಚಾರ ಆರಂಭಗೊಳ್ಳಲಿದೆ.
ಸೋಮವಾರ ಸಂಜೆ 7ಕ್ಕೆ ಹೊರಡುವ ಬಾಣಸವಾಡಿ-ಎರ್ನಾಕುಲಂ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ರೈಲು ನೂತನ ಟರ್ಮಿನಲ್ ನಿಂದ ಕಾರ್ಯಾಚರಣೆ ನಡೆಸುವ ಮೊದಲ ರೈಲಾಗಿದೆ.
“ಸರ್. ಎಂ. ವಿ. ಟರ್ಮಿನಲ್ನಿಂದ ಜೂನ್ 6 ರಿಂದ ಈ ಮೂರು ಜೋಡಿ ರೈಲುಗಳ ಚಾಲನೆಗೆ ರೈಲ್ವೆ ಮಂಡಳಿಯಿಂದ ಅನುಮತಿ ದೊರೆತಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಟರ್ಮಿನಲ್ನ ಅಧಿಕೃತ ಉದ್ಘಾಟನೆ ಆಗಲಿದೆ,” ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು. 2021ರ ಮಾರ್ಚ್ ನಲ್ಲಿ ಸರ್. ಎಂ. ವಿ. ಟರ್ಮಿನಲ್ ಕಾಮಗಾರಿ ಪೂರ್ಣಗೊಂಡಿತು. ಆದರೆ ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಉದ್ಘಾಟನೆ ಸಮಾರಂಭ ಮುಂದೂಡಲಾಯಿತು.
ಏಪ್ರಿಲ್ 5 ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಬೇಕಿತ್ತು. ಆದರೆ ಇತರೆ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳ ಕಾರಣದಿಂದ ಟರ್ಮಿನಲ್ ಉದ್ಘಾಟನೆ ಸಮಾರಂಭ ರದ್ದಾಯಿತು. ವಿಮಾನ ನಿಲ್ದಾಣದ ಮಾದರಿಯಲ್ಲಿ ಸರ್. ಎಂ. ವಿ. ಟರ್ಮಿನಲ್ ನಿರ್ಮಿಸಲಾಗಿದೆ. 314 ಕೋಟಿ ರೂ. ವೆಚ್ಚದಲ್ಲಿ 4,200 ಚದರ ಅಡಿ ವಿಸ್ತೀರ್ಣದಲ್ಲಿ ಟರ್ಮಿನಲ್ ನಿರ್ಮಾಣಗೊಂಡಿದೆ. ನಿತ್ಯ 50,000 ಪ್ರಯಾಣಿಕರು ತೆರಳಬಹುದಾದ ಸಾಮರ್ಥ್ಯ ಹೊಂದಿದೆ. Tಇಲ್ಲಿ ಒಟ್ಟು ಏಳು ಪ್ಲಾಟ್ಫಾರ್ಮ್ ಗಳು ಇವೆ.
ಪ್ರತಿ ದಿನ 50 ರೈಲುಗಳು ಟರ್ಮಿನಲ್ ನಿಂದ ಕಾರ್ಯನಿರ್ವಹಿಸಬಹುದಾಗಿದೆ. ಅಲ್ಲದೇ ಬೆಂಗಳೂರು ವಿಮಾನ ನಿಲ್ದಾಣದ ಮಾದರಿಯಲ್ಲಿ ಸೆಂಟ್ರಲೈಸ್ ಎಸಿ ಸೌಲಭ್ಯ ಹೊಂದಿದೆ. ಸರ್. ಎಂ. ವಿ. ಟರ್ಮಿನಲ್ ಮಾದರಿಯಲ್ಲಿ ಮಧ್ಯಪ್ರದೇಶದ ಹಬೀಬ್ ಗಂಜ್ ಮತ್ತು ಗುಜರಾತ್ ನ ಗಾಂಧಿನಗರದಲ್ಲಿ ಟರ್ಮಿನಲ್ ನಿರ್ಮಿಸಲಾಗಿದೆ. ಇವೆರಡು ಟರ್ಮಿನಲ್ ಗಳು ಸರ್. ಎಂ. ವಿ. ಟರ್ಮಿನಲ್ ಸಿದ್ಧವಾದ ನಂತರ ನಿರ್ಮಾಣಗೊಂಡಿದ್ದರೂ ಸಹ ಈಗಾಗಲೇ ಉದ್ಘಾಟನೆಗೊಂಡಿವೆ.