ಬೆಂಗಳೂರು: ಮೊದಲ ಬಾರಿಗೆ ಶಾಸಕರಾದ್ರೆ ಸಾಕು ನಮಗೆ ಸಚಿವ ಸ್ಥಾನ ಬೇಕು ಅಂತಾ ಪಟ್ಟು ಹಿಡಿಯುವ ಶಾಸಕರ ಮಧ್ಯೆ ಸದಾ ವಿಭಿನ್ನವಾಗಿ ನಿಲ್ಲುವವರು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಶಾಸಕ ಎಸ್. ಅಂಗಾರ ಅವರು. 6 ಬಾರಿ ಸತತವಾಗಿ ಶಾಸಕನಾಗಿ ಆಯ್ಕೆಯಾಗಿ ವಿಧಾನಸಭೆಯ ಮೆಟ್ಟಿರುತ್ತಲೇ ಇದ್ರೂ ಒಂದು ಬಾರಿಯೂ ಅವರು ಸಚಿವ ಸ್ಥಾನಕ್ಕೆ ಆಸೆ ಪಟ್ಟವರಲ್ಲ. ಲಾಭಿ ಮಾಡಿದವರಲ್ಲ. ತಾನಾಯ್ತು ತನ್ನ ಕೆಲಸವಾಯ್ತು ಅಂತಾ ತಮ್ಮ ವ್ಯಕ್ತಿತ್ವದ ಮೂಲಕವೇ ಗಮನ ಸೆಳೆದವರು.
ಇನ್ನು ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾದಾಗ ಇಡೀ ಸುಳ್ಯದ ಜನ ಸಂಭ್ರಮಿಸಿದ್ದರು. ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ರು. ಹೀಗಿದ್ದರೂ ಅವರು ಯಾವತ್ತೂ ಹಿಗ್ಗಿದವರಲ್ಲ. ಎಂದಿನಂತೆಯೇ ತಮ್ಮ ಸಿಂಪಲ್ ಜೀವನವನ್ನೇ ಮುಂದುವರಿಸಿದವರು. ಅಂಗಾರ ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಂಪುಟದಲ್ಲೂ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳೋದಕ್ಕೆ ಮುನ್ನ ಅಂಗಾರ ಅವರು ತಮ್ಮ ಕೇಸರಿ ಶಾಲಿಗೆ ತಾವೇ ಇಸ್ತ್ರಿ ಮಾಡಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
ಸಚಿವರಾಗಿದ್ದರೂ ಕೂಡ ಯಾವುದೇ ಹಮ್ಮುಬಿಮ್ಮಿಲ್ಲದೇ ಸರಳವಾಗಿ ಬದುಕುತ್ತಿರುವ ಅಂಗಾರ ಅವರು ಕರಾವಳಿಯ ಬಂಗಾರ ಎಂದರೆ ಖಂಡಿತಾ ತಪ್ಪಾಗಲಾರದು.