ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಟಾಚಾರಕ್ಕೆ ಪ್ರವಾಸ ಮಾಡಿದ್ದಾರೆ.ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರು ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಗಾಂಧಿಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ.ಮಳೆಯಿಂದಾಗಿ ಹಲವು ಜಿಲ್ಲೆಗಳ ಜನರು ಸಂಕಷ್ಟದಲ್ಲಿ ಇದ್ದಾರೆ. ಆದರೆ ಬಿಜೆಪಿ ಸಚಿವರು, ಶಾಸಕರು ರಾಜಧಾನಿಯ ಹೋಟೆಲ್ ನಲ್ಲಿ ಬೀಡುಬಿಟ್ಟಿದ್ದಾರೆ ಎಂದು ಲೇವಡಿ ಮಾಡಿ, ನಾನು ಕೂಡ ರಾಜ್ಯ ಪ್ರವಾಸ ಮಾಡುತ್ತೇನೆ. ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ ಎಂದರು.
ಬಿಜೆಪಿಯವರಿಗೆ ಸಾಮರಸ್ಯ ಕೆಡಿಸುವುದೇ ಕೆಲಸವಾಗಿ ಹೋಗಿದೆ. ಹೀಗಾಗಿ ತಮ್ಮ ಹುಟ್ಟುಹಬ್ಬಕ್ಕೆ ಇಲ್ಲ ಸಲ್ಲದ ಟೀಕೆ ಮಾಡುತ್ತಿದ್ದಾರೆ. ಬೇರೆಯವರ ಹುಟ್ಟು ಹಬ್ಬದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಯಡಿಯೂರಪ್ಪ ಅವರ ಹುಟ್ಟು ಹಬ್ಬಕ್ಕೂ ನಾನು ಹೋಗಿದ್ದೆ, ಬಿ.ಎಲ್ .ಸಂತೋಷ್ ಬಂದಿದ್ದರು. ಆಗ ಈ ಆರ್ ಎಸ್ ಎಸ್ ನವರು ಬಿಜೆಪಿಯವರು ಟೀಕೆ ಮಾಡಬಹುದಾಗಿತ್ತಲ್ಲ. ಆಗ ಏಕೆ ಮಾಡಲಿಲ್ಲ ಎಂದರು.