ಗುಜರಾತ್ ಎಸ್ಐಟಿ ಅಫಿಡವಿಟ್ನಲ್ಲಿ ಸತ್ಯವನ್ನು ಬಯಲು ಮಾಡಿದೆ ಎಂದಿರುವ ಬಿಜೆಪಿ, ‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಚಿನ ರೂವಾರಿ ಆಗಿದ್ದರು. ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಲಾಗಿತ್ತು ಹಾಗೂ ಅಹ್ಮದ್ ಪಟೇಲ್ ಆ ಸಂಚಿನ ಸೂತ್ರದ ಗೊಂಬೆ’ ಎಂದಿದೆ.
2002ರಲ್ಲಿ ಗುಜರಾತ್ನಲ್ಲಿ ನಡೆದ ಗಲಭೆ, ಹಿಂಸಾಕೃತ್ಯಗಳ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಆಗಿನ ಗುಜರಾತ್ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸಿದ್ದ ಸಂಚಿನ ‘ಚಾಲನಾ ಶಕ್ತಿ’ ಆಗಿದ್ದವರು ಸೋನಿಯಾ ಗಾಂಧಿ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಎರಡು ವರ್ಷಗಳ ಹಿಂದೆ ನಿಧನರಾದ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರ ಆದೇಶದಂತೆ ಬಂಧನದಲ್ಲಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಾಗೂ ಇತರರು ಜೊತೆಗೂಡಿ ನರೇಂದ್ರ ಮೋದಿ ಅವರ ವಿರುದ್ಧ ಸಂಚು ರೂಪಿಸಿದ್ದರು ಎಂದು ಗುಜರಾತ್ ಪೊಲೀಸ್ ವಿಶೇಷ ತನಿಖಾ ತಂಡ (ಎಸ್ಐಟಿ) ಹೇಳಿದೆ. ಹಿಂದೆ, ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಸಲಹೆಗಾರರಾಗಿದ್ದರು.
ಎಸ್ಐಟಿಯ ಅಫಿಡವಿಟ್ನ ಬೆನ್ನಲ್ಲೇ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ‘ಗುಜರಾತ್ ಸರ್ಕಾರವನ್ನು ಅಸ್ಥಿರಗೊಳಿಸುವುದು ಹಾಗೂ ನರೇಂದ್ರ ಮೋದಿ ಅವರನ್ನು ಅದರಲ್ಲಿ ಸಿಲುಕಿಸಲು ತೀಸ್ತಾ ಸೆಟಲ್ವಾಡ್ ನಡೆಸಿದ್ದ ಎಲ್ಲ ಪ್ರಯತ್ನಗಳೂ ಕಾಂಗ್ರೆಸ್ನ ಸೂಚನೆಯ ಮೇರೆಗೆ ನಡೆದಿದೆ. ಅದು ರಾಜಕೀಯ ದುರದ್ದೇಶದಿಂದ ಕೂಡಿರುವುದು ಸ್ಪಷ್ಟವಾಗಿದೆ. ತೀಸ್ತಾಗೆ ಕಾಂಗ್ರೆಸ್ ಆರಂಭದಲ್ಲಿ ಸುಮಾರು 30 ಲಕ್ಷ ರೂಪಾಯಿ ಪಾವತಿಸಿತ್ತು. ಹಣ ಮತ್ತು ಅಧಿಕಾರದ ಅತಿಯಾಸೆಯು ಪಿತೂರಿಯ ಉದ್ದೇಶ ಎಂಬುದು ಸ್ಪಷ್ಟ ‘ ಎಂದು ಆರೋಪಿಸಿದ್ದಾರೆ.
ಅಹ್ಮದ್ ಪಟೇಲ್ ಅವರದ್ದು ಹೆಸರಿಗಷ್ಟೇ ಸೂತ್ರಧಾರಿಕೆ…ಆದರೆ, ಚಾಲನಾಶಕ್ತಿ ಅವರ ನಾಯಕಿ ಸೋನಿಯಾ ಗಾಂಧಿ ಅವರು. ತಮ್ಮ ರಾಜಕೀಯ ಮುಖ್ಯ ಸಲಹೆಗಾರ ಅಹ್ಮದ್ ಪಟೇಲ್ ಮೂಲಕ ಸೋನಿಯಾ ಗಾಂಧಿ ಅವರು ಗುಜರಾತ್ನ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸಿದ್ದರು. ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರು ಹಾಳು ಮಾಡುವ ಪ್ರಯತ್ನಗಳನ್ನು ನಡೆಸಿದ್ದರು. ಆ ಸಂಚಿನ ಮೂಲಕರ್ತೃ ಸೋನಿಯಾ ಗಾಂಧಿ’ ಎಂದು ಸಂಬಿತ್ ಪಾತ್ರಾ ಶನಿವಾರ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.