ಉಡುಪಿ: ಮಣಿಪಾಲದ ಎಂಐಟಿ ಹಾಗೂ ಸಿಂಡಿಕೇಟ್ ಸರ್ಕಲ್ ಬಳಿ ಇರುವ ಬಸ್ ತಂಗುದಾಣದ ಎದುರು ಭಾಗದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುತ್ತಿರುವ ಬಗ್ಗೆ ಮಣಿಪಾಲ ಪೊಲೀಸರು ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿ ಬ್ಯಾರಿಕೇಡ್ ಹಾಗೂ ಟೇಪ್ ಅಳವಡಿಕೆ ಮಾಡಿದ್ದಾರೆ.
ಮಣಿಪಾಲ ಠಾಣೆಯ ಠಾಣಾಧಿಕಾರಿ ದೇವರಾಜ್ ಟಿ.ವಿ. ನೇತೃತ್ವದಲ್ಲಿ ಎಸ್ಐ ರಾಘವೇಂದ್ರ ಹಾಗೂ ಸಿಬಂದಿ ಮೊದಲಿಗೆ ಎಂಐಟಿ ಬಸ್ ನಿಲ್ದಾಣಕ್ಕೆ ತೆರಳಿ ನಿಲುಗಡೆ ಮಾಡಿರುವ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.
ದ್ವಿಚಕ್ರ ವಾಹನ ನಿಲುಗಡೆ ಮಾಡುತ್ತಿರುವ ಜಾಗಕ್ಕೆ ಕೋನ್ ಹಾಗೂ ಟೇಪ್ ಅಳವಡಿಕೆ ಮಾಡಲಾಯಿತು. ಇದರಿಂದಾಗಿ ರವಿವಾರ ಬಸ್ಗಳು ತಂಗುದಾಣದ ಎದುರು ಭಾಗದಲ್ಲಿ ನಿಂತ ಕಾರಣ ಯಾವುದೇ ಸಂಚಾರ ದಟ್ಟಣೆ ಕಂಡುಬರಲಿಲ್ಲ.
ನಂತರದಲ್ಲಿ ಪೊಲೀಸರು ಸಿಂಡಿಕೇಟ್ ಸರ್ಕಲ್ ಬಳಿ ಇರುವ ತಂಗುದಾಣದತ್ತ ತೆರಳಿದ ತಂಗುದಾಣದ ಎದುರುಭಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವು ಮಾಡುವಂತೆ ಸೂಚನೆ ನೀಡಿದರು.
ಸ್ಥಳೀಯ ಹೊಟೇಲ್ನ ಸೆಕ್ಯೂರಿಟಿ ಗಾರ್ಡ್ಗೂ ಈ ಭಾಗದಲ್ಲಿ ವಾಹನ ನಿಲುಗಡೆ ಮಾಡದಂತೆ ಸಂಬಂಧಪಟ್ಟವರಿಗೆ ತಿಳಿಸುವಂತೆ ಸೂಚಿಸಿದರು. ಇದರಿಂದಾಗಿ ರವಿವಾರ ಯಾವುದೇ ವಾಹನಗಳು ಇದರ ಎದುರು ಭಾಗದಲ್ಲಿ ನಿಲ್ಲಲಿಲ್ಲ. ಆದರೂ ಬಸ್ಗಳು ತಂಗುದಾಣದಲ್ಲಿ ನಿಲ್ಲದೆ ಎದುರು ಭಾಗದಲ್ಲಿರುವ ವೈನ್ಶಾಪ್ ಎದುರುಗಡೆಯೇ ನಿಲುಗಡೆ ಮಾಡುತ್ತಿರುವ ದೃಶ್ಯಾವಳಿಗಳು ಕಂಡುಬಂತು.
ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಎಂಐಟಿ ಬಸ್ ತಂಗುದಾಣದ ಎದುರು ಕೋನ್ ಹಾಗೂ ಟೇಪ್ಗ್ಳನ್ನು ಅಳವಡಿಕೆ ಮಾಡಿದ್ದೇವೆ. ಈ ಘಟನೆಗಳು ಮರುಕಳಿಸಿದರೆ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಸೂಚನೆಯನ್ನೂ ನೀಡಲಾಗಿದೆ. ಸುಗಮ ಸಂಚಾರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಇಲಾಖೆ ಬದ್ಧವಾಗಿದ್ದು, ಇದಕ್ಕೆ ಬೇಕಿರುವ ಪೂರಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಣಿಪಾಲ ಪೊಲೀಸ್ ಠಾಣೆಯ ಠಾಣಾಧಿಕಾರಿ ದೇವರಾಜ್ ಟಿ.ವಿ ಅವರು ತಿಳಿಸಿದ್ದಾರೆ.


