ಸುಬ್ರಮಣ್ಯ; ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇನಕಾರಿ ಪೋಸ್ಟ್ ಹಾಕಿದ ಅಂಗಡಿ ಮಾಲೀಕನ ವಿರುದ್ಧ ಕಾಂಗ್ರೆಸ್ ಮುಖಂಡರು ದೂರು ನೀಡಿ ಪ್ರಕರಣ ಪೊಲೀಸ್ ಮೆಟ್ಟಿಲೇರಿ ಬಳಿಕ ಕೈ ಮುಖಂಡರು ಅಂಗಡಿ ಮುಚ್ಚಿಸಿದ ಘಟನೆ ಪಂಜದಲ್ಲಿ ನಡೆದಿದೆ. ಬಳಿಕ ಅಂಗಡಿ ತೆರೆಸಿ ಬಿಜೆಪಿ ಮುಖಂಡರು ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಪಂಜದಲ್ಲಿ ಅಂಗಡಿ ಹೊಂದಿರುವ ವ್ಯಕ್ತಿಯೋರ್ವರು ಕಾಂಗ್ರೆಸ್ ಪಕ್ಷದ ಬಗ್ಗೆ ಹಾಗೂ ಕಾಂಗ್ರೆಸ್ ಮತದಾರರ ಬಗ್ಗೆ ಅವಹೇಳನಕಾರಿ ಸ್ಟೇಟಸ್ ಹಾಕಿದ್ದಾರೆಂಬ ಅಲ್ಲಿನ ಕೆಲವು ಕಾಂಗ್ರೆಸ್ ಮುಖಂಡರು ಅವಹೇಳನಕಾರಿ ಸ್ಟೇಟಸ್ ಹಾಕಿದ ವ್ಯಕ್ತಿಯ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿತ ವ್ಯಕ್ತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಈ ವೇಳೆ ಅಂಗಡಿ ಮಾಲೀಕ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಿದ್ದು, ಬಳಿಕ ಠಾಣೆಯ ಹೊರಗೆ ಇತ್ತಂಡದವರು ಮಾತುಕತೆ ನಡೆಸಿದ್ದರು. ಈ ವೇಳೆ ಅಂಗಡಿ ಮಾಲೀಕ ಕೇಸ್ ಹಿಂಪಡೆಯುವಂತೆ ವಿನಂತಿಸಿದ್ದು, ಈ ವೇಳೆ 3 ದಿನಗಳ ಕಾಲ ಅಂಗಡಿ ಮುಚ್ಚಬೇಕೆಂದು ದೂರು ನೀಡಿದ ತಂಡ ಷರತ್ತು ವಿಧಿಸಿತ್ತು. ಇದಕ್ಕೆ ಅಂಗಡಿ ಮಾಲೀಕ ಒಪ್ಪಿಕೊಂಡ ಬಳಿಕ ಪ್ರಕರಣ ಹಿಂತೆಗೆದು ಇತ್ಯರ್ಥಪಡಿಸಲಾಗಿತ್ತು.
ಅದರಂತೆ ಅಂಗಡಿ ಮಾಲೀಕ ಜೂ. 6ರಂದು ತನ್ನ ಅಂಗಡಿ ತೆರೆದಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಬಿಜೆಪಿ ಮುಖಂಡರು, ಅಂಗಡಿ ಮಾಲೀಕರನ್ನು ಸಂಪರ್ಕಿಸಿ ಅಂಗಡಿ ತೆರೆಯುವಂತೆ ಸೂಚಿಸಿದ್ದರು. ಅದರಂತೆ ಆ ವ್ಯಕ್ತಿ ಅಂಗಡಿಯನ್ನು ತೆರೆದಿದ್ದಾರೆ.
ಅವಹೇಳನಕಾರಿ ಸ್ಟೇಟಸ್ ಹಾಕಿರುವುದಕ್ಕೆ ತಪ್ಪೊಪ್ಪಿಕೊಂಡಿದ್ದು, ಅಂಗಡಿ ಬಂದ್ ಮಾಡುತ್ತೇನೆ ಎಂದು ಮುಚ್ಚಳಿಕೆ ಬರೆದುಕೊಟ್ಟಿರಲಿಲ್ಲ. ಕಾಂಗ್ರೆಸ್ನವರು ಹೇಳುತ್ತಾರೆ ಎಂದು ಅಂಗಡಿ ಮುಚ್ಚಲು ಸಾಧ್ಯವಿಲ್ಲ, ನಾವು ತಿಳಿಸಿದಂತೆ ಇದೀಗ ಅಂಗಡಿ ತೆರೆದಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.