ಇಂಧನ ಮತ್ತು ಖಾದ್ಯ ತೈಲ ಬೆಲೆ ಏರಿಕೆಯಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಸದ್ಯದಲ್ಲೇ ಮತ್ತೊಂದು ಶಾಕ್ ಸಿಗಲಿದೆ. ಸದ್ಯದಲ್ಲಿಯೇ ನಂದಿನಿ ಹಾಲಿನ ದರ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, “14 ಜಿಲ್ಲೆಗಳ ಹಾಲು ಒಕ್ಕೂಟಗಳು ಹಾಲಿನ ದರ ಏರಿಕೆ ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿವೆ. ನಾವು ಅದನ್ನು ಏಕರೂಪವಾಗಿ ಮಾಡಬೇಕಾಗಿದೆ. ಹೆಚ್ಚಿಸಿದ ಮೊತ್ತವನ್ನು ರೈತರಿಗೇ ನೀಡುತ್ತೇವೆ” ಎಂದಿದ್ದಾರೆ.
“ನಾವು ಈ ವಿಷಯವನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ತಿಳಿಸಿದ್ದೇವೆ ಮತ್ತು ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.”
“ಬೇಸಿಗೆಯಲ್ಲಿ ಹಸುಗಳಿಂದ ಹಾಲಿನ ಇಳುವರಿ ಕಡಿಮೆ ಇರುತ್ತದೆ. ಹಾಗಾಗಿ ಬೆಲೆ ಹೆಚ್ಚಿಸಿದರೆ ರೈತರಿಗೆ ಅನುಕೂಲವಾಗಲಿದೆ. ಬೆಳಗಾವಿಯಲ್ಲಿ ಹಸುವಿನ ಹಾಲಿನ ದರ ಲೀಟರ್ಗೆ 23 ರೂ. ರಿಂದ 25ಕ್ಕೆ ಏರಿಸಿದ್ದೇವೆ.ಅಂತೆಯೇ ಎಮ್ಮೆಯ ಹಾಲಿನ ದರ ಲೀಟರ್ ಗೆ 36 ರೂ.ಇದ್ದು, 38 ರೂ. ಕ್ಕೆ ಏರಿಕೆ ಮಾಡಲಾಗಿದೆ.
“ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಬೆಲೆ ಹೆಚ್ಚಿಸಿದರೆ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ. ಸಿಎಂ ಬೊಮ್ಮಾಯಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣ” ಎಂದರು.