ಉಡುಪಿ: ಶೋಭಾ ಕರಂದ್ಲಾಜೆ ಒಂದು ಟೂರಿಂಗ್ ಟಾಕೀಸ್ ಇದ್ದಂತೆ ಎಂದು ಸಚಿವ ಕೆ.ಜೆ. ಜಾರ್ಜ್ ವ್ಯಂಗ್ಯವಾಡಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಾರ್ಜ್,ಹಿಂದೆ ಅಲ್ಲಲ್ಲಿ ಸಿನೆಮಾ ತೋರಿಸುವ ಟೂರಿಂಗ್ ಟಾಕೀಸ್ ವ್ಯವಸ್ಥೆ ಇತ್ತು, ಶೋಭಾ ಬೆಂಗಳೂರಲ್ಲಿದ್ದರು, ಉಡುಪಿಗೆ ಬಂದರು.ಈಗ ಉಡುಪಿಯಿಂದ ಬೆಂಗಳೂರಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ.
ಕೆಡಿಪಿ ಸಭೆಗೆ ಬಿಜೆಪಿ ಸಂಸದೆ, ಮಂತ್ರಿ ಶೋಭಾ ಕರಂದ್ಲಾಜೆ ಬಂದಿಲ್ಲ ಎಂದು ಹೇಳಿದ ಕೆ.ಜೆ. ಜಾರ್ಜ್, ಕೋಟ ಶ್ರೀನಿವಾಸ ಪೂಜಾರಿ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡಲ್ಲ, ವಿಧಾನ ಪರಿಷತ್ ವಿಪಕ್ಷ ನಾಯಕರನ್ನು ಬದಲಾಯಿಸಿ ಬೇರೆ ಯಾರನ್ನೋ ತರಲು ಹೊರಟಿದ್ದಾರೆ ಎಂದಿದ್ದಾರೆ.
ಇದೇ ವೇಳೆ ದೇವೇಗೌಡ ಮತ್ತು ಯಡಿಯೂರಪ್ಪರನ್ನು ಪಕ್ಕದಲ್ಲಿ ಇಟ್ಟುಕೊಂಡು ನರೇಂದ್ರ ಮೋದಿ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುತ್ತಾರೆ ಎಂದು ಟೀಕಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್, ಬಿಜೆಪಿಯವರು ನಾಲ್ಕು ಮೀನು ಹಿಡಿಯಲು ಇಡೀ ಕೆರೆಯನ್ನು ಕೆಡಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ