ಮಂಗಳೂರು: ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿ ಬ್ರೇಕ್ ಫೇಲ್ ಆದ ಕಾರಣ ಎಡಪದವು ಬಳಿ ಸರಣಿ ಅಪಘಾತ ಸಂಭವಿಸಿದೆ.
ಮಂಗಳೂರಿನಿಂದ ಮೂಡಬಿದಿರೆಗೆ ತೆರಳುತ್ತಿದ್ದ ಲಾರಿಯ ಬ್ರೇಕ್ ಫೇಲ್ ಸಂಭವಿಸಿದ ಕಾರಣ ಎಡಪದವು ರಾಮಮಂದಿರದ ಬಳಿ ಅಪಘಾತ ನಡೆದಿದೆ.
ಬ್ರೇಕ್ ಫೇಲ್ ಆದ ಬಳಿಕ ಸುಮಾರು 500 ಮೀಟರ್ ದೂರದವರೆಗೂ ಬ್ರೇಕ್ ಸಿಗದೇ ಚಾಲಕ ಲಾರಿಯನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದ್ದರೂ ಮೂರು ವಾಹನಗಳಿಗೆ ಲಾರಿ ಡಿಕ್ಕಿ ಹೊಡೆದಿದೆ.
ಮೊದಲು ಕಾರೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡು ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ ಎಣ್ಣೆ ಸರಬರಾಜು ಮಾಡುತ್ತಿದ್ದ ಪಿಕಪ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಪಿಕಪ್ ಉರುಳಿ ಬಿದ್ದು ಎಣ್ಣೆ ಪ್ಯಾಕೆಟ್ ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ.
ಇದೇ ವೇಳೆ ಎದುರಿನಿಂದ ಬರುತ್ತಿದ್ದ ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದಿದೆ. ಕೊನೆಗೆ ಎಡಪದವು ಪೇಟೆಯಲ್ಲಿ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು ಲಾರಿ ನಿಂತಿದೆ.
ಸರಣಿ ಅಪಘಾತದ ನಡುವೆ ಅಂಗಡಿಯೊಂದರ ಕಟ್ಟಡಕ್ಕೂ ಹಾನಿಯಾಗಿದೆ.