Friday, June 5, 2026
HomeUncategorizedಉಡುಪಿ: ಬಡ ಹೆಣ್ಣು ಮಕ್ಕಳನ್ನು ಹಿಜಾಬ್ ಹೆಸರಿನಲ್ಲಿ ಪ್ರಚೋದಿಸಲಾಗುತ್ತಿದೆ; ಸಚಿವೆ ಶೋಭಾ ಕರಂದ್ಲಾಜೆ ಆರೋಪ

ಉಡುಪಿ: ಬಡ ಹೆಣ್ಣು ಮಕ್ಕಳನ್ನು ಹಿಜಾಬ್ ಹೆಸರಿನಲ್ಲಿ ಪ್ರಚೋದಿಸಲಾಗುತ್ತಿದೆ; ಸಚಿವೆ ಶೋಭಾ ಕರಂದ್ಲಾಜೆ ಆರೋಪ

- Advertisement -
- Advertisement -

ಉಡುಪಿ: ದೇಶದ ಸಂವಿಧಾನವನ್ನು ನೆಲದ ಕಾನೂನನ್ನು ಪ್ರತಿ ಯೊಬ್ಬರೂ ಗೌರವಿಸಬೇಕು. ಆದರೆ ಸಂವಿಧಾನಕ್ಕಿಂತ ನಾವು ಮೇಲು ಎಂದು ಕೆಲವರಿಗೆ ಅನಿಸಿದೆ. ಇಂಥವರಿಗೆ ಕಾನೂನಿನಂತೆ ಶಿಕ್ಷೆ ಆಗುವ ಅನಿವಾರ್ಯತೆ ಇದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ಪಟ್ಟಿದ್ದಾರೆ.


ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ನಮ್ಮ ಮಕ್ಕಳಿಗೆ ಇಂದು ಬೇಕಾಗಿರುವುದು ಉತ್ತಮ ಶಿಕ್ಷಣ. ಶಿಕ್ಷಣ ಹಾಗೂ ಉದ್ಯೋಗಕ್ಕೆ ಯಾವುದೇ ಧರ್ಮವಿಲ್ಲ. ಮಕ್ಕಳು ಓದಬೇಕು, ಉದ್ಯೋಗ ಪಡೆಯಬೇಕು ಹಾಗೂ ತಮ್ಮ ಕಾಲ ಮೇಲೆ ನಿಲ್ಲಬೇಕು. ಮುಸ್ಲಿಂ ಹೆಣ್ಣು ಮಕ್ಕಳು ಕೂಡಾ ಒಳ್ಳೆಯ ಶಿಕ್ಷಣ ಪಡೆಯಬೇಕು ಎಂದವರು ಹೇಳಿದರು.


ಆದರೆ ಹಿಜಾಬ್ ಹೆಸರಿನಲ್ಲಿ ಬಡ ಕುಟುಂಬದ ಹೆಣ್ಣುಮಕ್ಕಳನ್ನು ಪ್ರಚೋದಿಸ ಲಾಗುತ್ತಿದೆ ಎಂದವರು ಆರೋಪಿಸಿದರು. ಶ್ರೀಮಂತರಿಗೆ ಹಿಜಾಬ್ ಜೊತೆ ಯಾವುದೇ ಸಂಬಂಧವಿಲ್ಲ. ಬಡ ಹೆಣ್ಣು ಮಕ್ಕಳನ್ನು ಮಾತ್ರ ಪ್ರಚೋದನೆ ಮಾಡಿ ಈ ಕೃತ್ಯ ಮಾಡಿಸಲಾಗುತ್ತಿದೆ. ಶಾಲೆಗೆ ಬೇಕಿದ್ದರೂ ಹೋಗಲ್ಲ, ಆದರೆ ಹಿಜಾಬ್ ಅಗತ್ಯ ಎನ್ನುತಿದ್ದಾರೆ ಎಂದರು.


ಇದೊಂದು ವ್ಯವಸ್ಥಿತ ಷಡ್ಯಂತ್ರ. ಯಾವುದೋ ಸಂಘಟನೆ ಈ ಕೆಲಸ ಮಾಡುತ್ತಿದೆ ಎಂದು ಹೈಕೋರ್ಟ್ ಕೂಡಾ ಹೇಳಿದೆ ಎಂದ ಅವರು, ಇದರ ಹಿಂದಿರುವ ಕಾರಣಗಳನ್ನು ಪತ್ತೆ ಮಾಡಬೇಕಾಗಿದೆ ಎಂದರು.


ಎಲ್ಲಾ ಮಕ್ಕಳ ದಯಮಾಡಿ ಶಾಲೆಗೆ ಬನ್ನಿ, ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ನಿಮಗೆ ರಕ್ಷಣೆ ನೀಡುತ್ತಾರೆ. ಯಾರು ಕೂಡಾ ಆತಂಕ ಪಡುವ ಅಗತ್ಯವಿಲ್ಲ. ಪರೀಕ್ಷೆ ಬರೆಯಿರಿ, ಚೆನ್ನಾಗಿ ಓದಿ ಉದ್ಯೋಗ ಪಡೆಯಿರಿ. ಎಲ್ಲಾ ಹೆಣ್ಣುಮಕ್ಕಳ ಸ್ವಂತ ಕಾಲ ಮೇಲೆ ನಿಲ್ಲಬೇಕು. ಎಲ್ಲಾ ಧರ್ಮದವರಿಗೂ ಇದು ಅನ್ವಯಿಸುತ್ತದೆ. ಜೀವನದಲ್ಲಿ ಕಷ್ಟ ಬಂದಾಗ ಯಾವುದೇ ಸಂಘಟನೆ ನಿಮ್ಮ ನೆರವಿಗೆ ಬರುವುದಿಲ್ಲ. ಹೀಗಾಗಿ ಯಾರದೋ ಪಿತೂರಿಗೆ ಬಲಿಯಾಗಬೇಡಿ ಎಂದರು.

- Advertisement -

Latest News

error: Content is protected !!