ಸುಳ್ಯ : ಇಲ್ಲಿನ ತೋಡಿಕಾನ ನಿವಾಸಿಯಾಗಿರುವ ತೆಂಕುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ತೋಡಿಕಾನ ವಿಶ್ವನಾಥ ಗೌಡ (62) ಅವರು ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದ ತಮ್ಮ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಪಡೆದು ನಾಲ್ಕೂವರೆ ದಶಕಗಳಿಂದ ಕಲಾಸೇವೆ ಮಾಡಿರುವ ವಿಶ್ವನಾಥ ಗೌಡರು ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದ್ರು ಅವರಲ್ಲಿ ಯಕ್ಷಗಾನ ತರಬೇತಿ ಪಡೆದಿದ್ದರು. ಸುಂಕದಕಟ್ಟೆ, ಕದ್ರಿ, ಕುಂಬಳೆ, ಕರ್ನಾಟಕ ಮೇಳಗಳಲ್ಲಿ ತಿರುಗಾಟ ಮಾಡಿ ಕಳೆದ ಮೂರು ದಶಕಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ದಮಯಂತಿ, ಚಂದ್ರಮತಿ, ಕಯಾದು, ಸೀತೆ, ಶ್ರೀದೇವಿ, ಯಶೋಮತಿ, ನಂದಿನಿ, ಅಜಮುಖಿ, ಶಾರದೆ, ಶಶಿಪ್ರಭೆಯೂ ಸೇರಿದಂತೆ ಹಲವು ಪೌರಾಣಿಕ ಪಾತ್ರಗಳಲ್ಲಿ ಅದ್ಭುತವಾಗಿ ಅಭಿನಯಿಸಿ, ಕಲಾಭಿಮಾನಿಗಳ ಪ್ರೀತಿದೆ ಪಾತ್ರ ರಾಗಿದ್ದರು. ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.