ಮಂಗಳೂರು; ಜೆಸಿಐ ಗಣೇಶಪುರ ಘಟಕದ ವತಿಯಿಂದ ದಿನಾಂಕ 18-01-2026ನೇ ಭಾನುವಾರದಂದು ಬಾಳ ಗ್ರಾಮ ಪಂಚಾಯತ್ ನ ಸಮುದಾಯ ಭವನದಲ್ಲಿ ಗಣೇಶಪುರ ಪರಿಸರದ ಆರ್ಥಿಕವಾಗಿ ಹಿಂದುಳಿದ ಅರ್ಹ ಮಹಿಳೆಯರಿಗೆ 20 ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೇಮಿಕಲ್ಸ್ ಲಿಮಿಟೆಡ್ ಸಂಸ್ಥೆಯ ಸಿಎಸ್ಆರ್ ಯೋಜನೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದು, ಮಹಿಳೆಯರ ಸ್ವಾವಲಂಬನೆ ಹಾಗೂ ಆರ್ಥಿಕ ಸಬಲೀಕರಣದ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಕೇಶವ ಪಾಟಾಳಿ, ವ್ಯವಸ್ಥಾಪಕರು – ಸಿಎಸ್ಆರ್, ಎಂಆರ್ಪಿಎಲ್ ಇವರು ಭಾಗವಹಿಸಿ, ಮಹಿಳೆಯರು ಈ ಕೊಡುಗೆಯನ್ನು ಸದುಪಯೋಗಪಡಿಸಿಕೊಂಡು ಸ್ವಂತ ಆದಾಯದ ಮಾರ್ಗಗಳನ್ನು ರೂಪಿಸಿಕೊಳ್ಳಬೇಕು ಎಂಬುದಾಗಿ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ಭಾರತದ ವಲಯ 15ರ ಉಪಾಧ್ಯಕ್ಷರಾದ ಜೆಎಫ್ಎಂ ಅರುಣ್ ಮಾಂಜ ಹಾಗೂ ಜೆಸಿಐ ಇಂಡಿಯಾದ ವಲಯ ನಿರ್ದೇಶಕರು – ಸಮುದಾಯ ಅಭಿವೃದ್ಧಿ, ಜೆಎಫ್ಡಿ ವಿಘ್ನೇಶ್ ಪ್ರಸಾದ್ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು, ಜೆಸಿಐ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಮಹತ್ವವನ್ನು ವಿವರಿಸಿದರು.ಈ ಕಾರ್ಯಕ್ರಮವು ಜೆಸಿಐ ಗಣೇಶಪುರದ ಅಧ್ಯಕ್ಷರಾದ ಜೆಎಫ್ಎಂ ದೇವಿಚರಣ್ ಟಿ ಶೆಟ್ಟಿ ಅವರ ನಾಯಕತ್ವದಲ್ಲಿ ಆಯೋಜಿಸಲ್ಪಟ್ಟಿದ್ದು, ಘಟಕದ ಸದಸ್ಯರು ಹಾಗೂ ಜೆಜೆಸಿ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಸ್ಥಳೀಯ ಮಹಿಳೆಯರಿಗೆ ಸ್ವಾವಲಂಬನೆಯ ಅವಕಾಶ ಒದಗಿಸುವ ಈ ಕಾರ್ಯಕ್ರಮವು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು ಮತ್ತು ಮುಂದಿನ ದಿನಗಳಲ್ಲಿ ಜೇಸಿಐ ಗಣೇಶಪುರದಿಂದ ಇಂತಹ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳು ಮೂಡಿಬರಲಿ ಎನ್ನುವ ಆಶಯ ವ್ಯಕ್ತವಾಯಿತು.


