ಕೊಟ್ಟಿಗೆಹಾರ; ಇಲ್ಲಿನ ಸುಂಕಸಾಲೆ ಸಮೀಪದ ಅಬ್ರುಗುಡಿಗೆಯ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರದಾರರು ಪರದಾಡುವಂತಾಗಿದೆ. ಕಳೆದ ಕೆಲದಿನಗಳಿಂದ ಸರ್ವರ್ ಸಮಸ್ಯೆಯಿಂದ ಪಡಿತರದಾರರು ನ್ಯಾಯಬೆಲೆ ಅಂಗಡಿಯಲ್ಲಿ ಸಂಜೆಯವರೆಗೂ ಕಾದು ಹಿಂದಿರುಗುವಂತಾಗಿದೆ.ಈ ಭಾಗದಲ್ಲಿ ಬಹುತೇಕರೂ ಕೂಲಿ ಕಾರ್ಮಿಕರಾಗಿದ್ದು ಕೆಲಸಕ್ಕೆ ರಜೆ ಮಾಡಿ ನ್ಯಾಯಬೆಲೆ ಅಂಗಡಿಗೂ ಬಂದರೂ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಸಾಧ್ಯವಾಗದಂತಾಗಿದೆ.ಹಳ್ಳಿಗಾಡು ಪ್ರದೇಶದಿಂದ ಬರುವ ಮಹಿಳೆಯರು, ವೃದ್ಧರು ದಿನಗಟ್ಟಲೆ ನ್ಯಾಯಬೆಲೆ ಅಂಗಡಿ ಬಾಗಿಲು ಕಾಯುವಂತಾಗಿದೆ.
ಅರಮನೆ ತಲಗೂರು ಗ್ರಾಮದ ವೃದ್ದೆ ಸುಂದರಮ್ಮ ಎರಡು ದಿನದಿಂದ ಸುಮಾರು 15 ಕಿ.ಮಿ ದೂರದಿಂದ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬಂದಿದ್ದು ಬೆಳಿಗ್ಗೆ 9 ರಿಂದ ಸಂಜೆ 5-30 ರವರೆಗೂ ಕಾದರೂ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಸಾಧವಾಗಲಿಲ್ಲ. ಇದೇ ರೀತಿ ಪರಿಸ್ಥಿತಿ ಹಲವರದ್ದು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಆಹಾರ ಶಿರೇಸ್ತೆದಾರ್ ಇಂದ್ರೇಶ್, ಬೆಳಿಗ್ಗೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಸರ್ವರ್ ಸಾಮಾನ್ಯವಾಗಿ ಸರಿ ಇರುವುದರಿಂದ ಬೆಳಿಗ್ಗೆ 8ಗಂಟೆಯಿಂದ 10-30 ರವರೆಗೆ ಹಾಗೂ ಮಧ್ಯಾಹ್ನ ಸಮಯದಲ್ಲಿ ಕಾರ್ಯ ನಿರ್ವಹಿಸಿದರೆ ಪಡಿತರ ವಿತರಿಸಬಹುದಾಗಿದೆ. ಈ ಬಗ್ಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.
‘ಕೆಲಸಕ್ಕೆ ರಜೆ ಮಾಡಿ ಕೆಲವರು ಎರಡು ದಿನದಿಂದ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದ ತೊಂದರೆಯಾಗಿದ್ದು ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಅವರೆಲ್ಲಾ ಆಗ್ರಹಿಸುತ್ತಿದ್ದಾರೆ.