
ಕಡಬ; ಅಪ್ರಾಪ್ತೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಕಡಬ ಸಂಚಾರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜೂನ್ 26 ರಂದು ಸಂಜೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯೊಬ್ಬಳು ದಿಢೀರನೆ ನಾಪತ್ತೆಯಾಗಿದ್ದಳು. ಈ ಕುರಿತು ಬಾಲಕಿಯ ತಾಯಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿ ಮಗಳು ಕಾಣೆಯಾಗಿರುವ ಬಗ್ಗೆ ಲಿಖಿತ ದೂರು ನೀಡಿದ್ದರು. ತಾಯಿಯ ದೂರಿನ ಮೇರೆಗೆ ತಕ್ಷಣವೇ ತನಿಖೆ ಆರಂಭಿಸಿದ ಸುಬ್ರಹ್ಮಣ್ಯ ಪೊಲೀಸರು ತೀವ್ರ ಹುಡುಕಾಟ ನಡೆಸಿದಾಗ, ನಾಪತ್ತೆಯಾಗಿದ್ದ ಬಾಲಕಿಯು ಪುತ್ತೂರಿನ ಲಾಡ್ಜ್ ನಲ್ಲಿ ಪತ್ತೆಯಾಗಿದ್ದಳು.
ಬಾಲಕಿಯನ್ನು ಅಪಹರಿಸಿರುವ ಆರೋಪದಡಿಯಲ್ಲಿ ಸುಬ್ರಹ್ಮಣ್ಯ ಪೊಲೀಸರು ಜೂನ್ 29 ರಂದು ಆರೋಪಿಯನ್ನು ಬಂಧಿಸಿದ್ದರು. ಆತನ ವಿರುದ್ಧ ಅಪರಾಧ ಸಂಖ್ಯೆ: 24/2026 ರಂತೆ ಪ್ರಕರಣ ದಾಖಲಿಸಿಕೊಂಡು ಎಫ್ ಐ ಆರ್ ಸಿದ್ಧಪಡಿಸಲಾಗಿತ್ತು. ಬಳಿಕ ಬಂಧಿತ ಆರೋಪಿಯನ್ನು ಜೂನ್ 30 ರಂದು ಸಂಜೆ ಕಡಬದ ಸಂಚಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ವೇಳೆ ಆರೋಪಿಯ ಪರವಾಗಿ ವಕೀಲರುಗಳಾದ ಲೋಕೇಶ್ ಎಂ.ಜೆ., ಕಕ್ಕೆಕೃಷ್ಣಪ್ಪ ಗೌಡ ಹಾಗೂ ಕವನ ಬಿ. ಅವರು ನ್ಯಾಯಾಲಯದಲ್ಲಿ ಹಾಜರಾಗಿ ವಾದ ಮಂಡಿಸಿದರು. ಆರೋಪಿಯ ಪರವಾಗಿ ಸಲ್ಲಿಸಲಾದ ಜಾಮೀನು ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಲಯವು, ವಕೀಲರ ವಾದವನ್ನು ಪುರಸ್ಕರಿಸಿ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.


