ಈ ವರುಷ ಚಿತ್ರರಂಗ ಹಲವಾರು ಕಲಾವಿದರನ್ನು ಕಳೆದುಕೊಂಡಿತು. ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಸಂಚಾರಿ ವಿಜಯ್, ಹಿರಿಯ ನಟ ಶಿವರಾಮ್ ಸೇರಿದಂತೆ ಸಾಕಷ್ಟು ಚಿತ್ರರಂಗದ ಕಲಾವಿದರನ್ನು ಕಳೆದುಕೊಂಡಿದೆ.
ಇದೀಗ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆವಿ ರಾಜು ನಿಧನ ಹೊಂದಿದ್ದಾರೆ. ಅನಾರೋಗ್ಯದ ಕಾರಣ ಮನೆಯಲ್ಲಿಯೇ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಅವರು ಇಂದು ಮುಂಜಾನೆ 8ಕ್ಕೆ ಇಹಲೋಕ ತ್ಯಜಿಸಿದ್ದಾರೆ.
ರಾಜಾಜಿನಗರದ ನಿವಾಸದಲ್ಲೇ ಕೆ.ವಿ.ರಾಜು ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹರಿಶ್ಚಂದ್ರ ಘಾಟ್ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಇವರು ಹುಲಿಯಾ, ಬೆಳ್ಳಿ ಮೋಡಗಳು, ಇಂದ್ರಜಿತ್, ಬೆಳ್ಳಿ ಕಾಲುಂಗುರ, ಯುದ್ದಕಾಂಡ, ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಸ್ಯಾಂಡಲ್ವುಡ್ ಮಾತ್ರವಲ್ಲದೇ ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಚಿತ್ರಕ್ಕೂ ನಿರ್ದೇಶನ ಮಾಡಿದ್ದಾರೆ.