ಕಾಸರಗೋಡು: ವಿದೇಶದಲ್ಲಿ ಮನೆ ಕೆಲಸಕ್ಕಾಗಿ ಕಾಸರಗೋಡಿನ ಯುವತಿಯರನ್ನು ಕರೆದುಕೊಂಡು ಹೋಗಿ ಸಿರಿಯಾದ ಐಸಿಸ್ ಕೇಂದ್ರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಸ್ಫೋಟಕ ಸತ್ಯವೊಂದನ್ನು ಸಿರಿಯಾದಿಂದ ತಪ್ಪಿಸಿಕೊಂಡು ಬಂದ ಯುವತಿಯೊಬ್ಬಳು ಬಿಚ್ಚಿಟ್ಟಿದ್ದಾಳೆ.
ಗಲ್ಪ್ ರಾಷ್ಟ್ರ ಕೇಂದ್ರೀಕರಿಸಿ ಯುವತಿಯರನ್ನು ಮನೆಕೆಲಸಗಳಿಗೆ ರವಾನಿಸಲು ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎನ್ಐಎಗೆ ಮಾಹಿತಿ ಲಭಿಸಿದ್ದು, ಈತನ ಪತ್ತೆಗೆ ಬಲೆ ಬೀಸಿದೆ.
ಎರ್ನಾಕುಳಂನ ನೇಮಕಾತಿ ಸಂಸ್ಥೆಯೊಂದು ಮಾವೇಲಿಕ್ಕರ ನಿವಾಸಿ ಯುವತಿಯನ್ನು ಕುವೈತ್ಗೆ ಕಳುಹಿಸಿದ್ದು, ಅಲ್ಲಿಂದ ಆಕೆಯನ್ನು ಸಿರಿಯಾಕ್ಕೆ ರವಾನಿಸಿದೆ. ತಂಡದ ವಶದಲ್ಲಿದ್ದ ಈ ಯುವತಿ ತಪ್ಪಿಸಿಕೊಂಡು ಊರಿಗೆ ಬಂದಿದ್ದು, ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾಳೆ.
ವಿದೇಶದಲ್ಲಿ ಮನೆಕೆಲಸಕ್ಕೆ ಯುವತಿಯರು ಬೇಕಾಗಿದ್ದು, 50 ಸಾವಿರ ರೂ.ವರೆಗೆ ವೇತನ ನೀಡುವುದಾಗಿ ಜಾಹೀರಾತು ನೀಡುತ್ತಾರೆ. ಗಲ್ಪ್ ರಾಷ್ಟ್ರಕ್ಕೆ ಯುವತಿಯರು ತಲುಪುತ್ತಿದ್ದಂತೆ ಅವರನ್ನು 10 ಲಕ್ಷ ರೂ.ಗೂ ಹೆಚ್ಚಿನ ಮೊತ್ತಕ್ಕೆ ಸಿರಿಯಾದ ಐಸಿಸ್ ಕೇಂದ್ರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಯುವತಿ ತಿಳಿಸಿದ್ದಾಳೆ. ಯುವತಿ ನೀಡಿದ ಮಾಹಿತಿ ಅನ್ವಯ ದೂರು ದಾಖಲಾಗಿದ್ದರೂ ಪ್ರಕರಣವನ್ನು ಎನ್ಐಎಗೆ ವಹಿಸದಿರುವುದರಿಂದ ತನಿಖೆ ವಿಳಂಬವಾಗುತ್ತಿದೆ. ಈ ಕೃತ್ಯದಲ್ಲಿ ತಳಿಪರಂಬ ನಿವಾಸಿ ಮಜೀದ್ ಎಂಬಾತನ ಕೈವಾಡವಿರುವ ಬಗ್ಗೆ ಗುಮಾನಿ ವ್ಯಕ್ತವಾಗಿದ್ದು, ಆತನ ಪತ್ತೆಗೆ ತನಿಖಾ ಏಜೆನ್ಸಿ ಕ್ರಮ ಕೈಗೊಂಡಿದೆ.