ಉಡುಪಿ: ರಸ್ತೆ ಅವ್ಯವಸ್ಥೆ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಲು ಮುಂದಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ, ಕೇಂದ್ರ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಸೆಲ್ಫಿ ವಿತ್ ಎಂಪಿ ಶೋಭಾ ಕರಂದ್ಲಾಜೆ ಹೆಸರಿನಲ್ಲಿ ವಿನೂತನ ಪ್ರತಿಭಟನೆ ಶುರುಮಾಡಿದೆ.
ಉಡುಪಿಯಿಂದ ಮಲ್ಪೆಯವರೆಗಿನ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಈ ಪ್ರತಿಭಟನೆ ನಡೆಸಲಾಗುತ್ತಿದೆ. ವಿಜೇತ 5 ಮಂದಿಗೆ ತಲಾ 5 ಸಾವಿರ ನೀಡುದಾಗಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಘೋಷಣೆ ಮಾಡಿದ್ದಾರೆ. ಸಂಸದೆ ಶೋಭಾ ಜೊತೆಗೆ ಸೆಲ್ಪಿ ತೆಗೆದು ಕಳುಹಿಸುವ ವಿಶೇಷ ಸ್ಪರ್ಧೆ ಆಯೋಜನೆ ಮಾಡಿದ್ದು, ಅಕ್ಟೋಬರ್ 6 ರಿಂದ 14ರೊಳಗೆ ಉಡುಪಿ, ಕಾಪು, ಕುಂದಾಪುರದಲ್ಲಿ ಶೋಭಾ ಜೊತೆ ಸೆಲ್ಫಿ ತೆಗೆದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕಳುಹಿಸಬೇಕು. ಅಕ್ಟೋಬರ್ 14ರ ನಂತರವೂ ಸಂಸದೆ ಶೋಭಾ ಉಡುಪಿಗೆ ಬಾರದೇ ಇದರೆ, ಎಲ್ಲಾ ಠಾಣೆಯಲ್ಲೂ ನಾಪತ್ತೆ ದೂರು ದಾಖಲಿಸುತ್ತೇವೆ. ಉಡುಪಿಯ ಪ್ಲೈ ಓವರ್ ಮೇಲೆ ಶೋಭಾ ಕರಂದ್ಲಾಜೆ ಪೋಸ್ಟರ್ ಅಂಟಿಸುತ್ತೇವೆ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಮುಖಂಡ ಮಿಥುನ್ ರೈ ವ್ಯಂಗ್ಯವಾಡಿದ್ದಾರೆ.