ಬೆಂಗಳೂರು : ಇಂದು ಸಂಜೆ 4.30 ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದ್ದು, ಪರೀಕ್ಷೆ ಬರೆಯದೇ 6,66,497 ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದು, ಈ ಪೈಕಿ 5,90,153 ಮಂದಿ ಹೊಸ ವಿದ್ಯಾರ್ಥಿಗಳಿದ್ದರೆ, 76,344 ಮಂದಿ ಮರುಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳಿದ್ದಾರೆ.
ಇಂದು ಪ್ರಕಟವಾಗುವ ಫಲಿತಾಂಶದ ಬಗ್ಗೆ ಯಾವುದೇ ವಿದ್ಯಾರ್ಥಿಗೆ ತಕರಾರಿದ್ದರೆ ಅವರಿಗೆ ಮರು ಪರೀಕ್ಷೆ ಬರೆಯಲು ಆಗಸ್ಟ್ ತಿಂಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಹೇಳಿದ್ದಾರೆ.
ಸುಮಾರು 17 ಸಾವಿರ ವಿದ್ಯಾರ್ಥಿಗಳು ಮುಂದಿನ ತಿಂಗಳು ಪರೀಕ್ಷೆ ಬರೆಯುವವರಿದ್ದಾರೆ. ಇಂದಿನ ಫಲಿತಾಂಶವನ್ನು ತಿರಸ್ಕರಿಸುವವರಿಗೂ ಅದೇ ಸಮಯದಲ್ಲಿ ಹೊಸದಾಗಿ ಪರೀಕ್ಷೆ ನೀಡಲಾಗುವುದು ಎಂದು ಇಲಾಖೆ ಸ್ಪಷ್ಟನೆ ನೀಡಿದೆ.
ಸಿಬಿಎಸ್ ಇ ಮಾದರಿಯಲ್ಲಿ ಎಸ್ಎಸ್ಎಲ್ ಸಿ, ಪ್ರಥಮ ಪಿಯುಸಿ ಅಂಕ ಪರಿಗಣಿಸಿ ಫಲಿತಾಂಶ ನೀಡಲು ಸಿದ್ಧತೆ ಕೈಗೊಳ್ಳಲಾಗಿದ್ದು, ಗ್ರೇಡ್ ಬದಲು ಅಂಕಗಳ ಆಧಾರದಲ್ಲಿ ಫಲಿತಾಂಶ ಹೊರಬೀಳಲಿದೆ.