ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ಹಾಗೂ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ದಸರಾವರೆಗೂ ಶಾಲಾ ಕಾಲೇಜುಗಳನ್ನು ತೆರೆಯದಿರಲು ಸರ್ಕಾರ ತೀರ್ಮಾನಿಸಿದೆ.
ದಸರಾ ಹಬ್ಬ ಮುಗಿದ ನಂತರವೇ ಪದವಿ,ಪದವಿಪೂರ್ವ, ಪ್ರೌಢಶಾಲೆ, ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳನ್ನು ಪರಿಸ್ಥಿತಿಗನುಗುಣವಾಗಿ ಆರಂಭಿಸುವುದು ಹಾಗೂ ನರ್ಸರಿ ಶಾಲೆಗಳನ್ನು ಜನವರಿವರೆಗೂ ತೆರೆಯದಂತೆ ಶಾಲಾ ಆಡಳಿತ ಮಂಡಳಿಗಳಿಗೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಿದೆ.
ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭದ ಬಗ್ಗೆ ಶಿಕ್ಷಣ ಇಲಾಖೆ ಪೋಷಕರು, ಶಿಕ್ಷಣ ತಜ್ಞರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರ ಅಭಿಪ್ರಾಯವನ್ನು ಸಂಗ್ರಹಿಸಿತ್ತು. ಇಂತಹ ಅಭಿಪ್ರಾಯ ಸಂಗ್ರಹದಲ್ಲಿ ಶೇ.80ರಷ್ಟು ಅಧಿಕ ಪೋಷಕರು ಸದ್ಯದ ಪರಿಸ್ಥಿತಿಯಲ್ಲಿ ಶಾಲಾ-ಕಾಲೇಜುಗಳನ್ನು ತೆರೆಯಲೇ ಬಾರದೆಂಬ ಬಲವಾದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
ಒಂದು ವೇಳೆ ಶಾಲಾ-ಕಾಲೇಜು ಆಗಸ್ಟ್ ನಲ್ಲಿ ತೆರೆದ ನಂತ್ರ ಅಪ್ಪಿ ತಪ್ಪಿ ಯಾವುದೇ ಒಂದು ಮಗುವಿಗೂ ಕೊರೋನಾ ಸೋಂಕು ತಗುಲಿದರೂ, ಇಡೀ ಶಾಲೆಯಲ್ಲಿನ ಮಕ್ಕಳಿಗೆ ಹಬ್ಬಲಿದೆ ಎಂಬ ಭೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ 1 ರಿಂದ 5ನೇ ತರಗತಿಯ ಮಕ್ಕಳಿಗೆ ಸೋಂಕು ತಗುಲಿದ್ದೇ ಆದಲ್ಲಿ ಬದುಕುಳಿಯುವುದೇ ಕಷ್ಟ. ಹೀಗಾಗಿ ಶಾಲಾ-ಕಾಲೇಜು ತೆರೆಯೋದು ಬೇಡ. ನೀವು ತೆರೆದರೂ ನಾವು ನಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸೋದಿಲ್ಲ ಎಂಬುದಾಗಿ ಖಡಕ್ ನಿರ್ಧಾರವನ್ನು ತಿಳಿಸಿದ್ದಾರಂತೆ.