ಕೇವಲ ಶೇ. 50ರಷ್ಟು ರೈತರಿಗೆ ಮಾತ್ರ ಕೃಷಿ ಸಾಲ ಮನ್ನಾ ಮಾಡಿದ್ದರಿಂದ ಉಪಯೋಗವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ)ನ ಪರಿಣಿತರ ತಂಡ ನಡೆಸಿದ ಅಧ್ಯಯನವೊಂದರ ವರದಿ ತಿಳಿಸಿದೆ.
ಎಸ್ಬಿಐ ಅಧ್ಯಯನದ ಪ್ರಕಾರ, ಸಾಲ ಮನ್ನಾವನ್ನು ಆರ್ಹತೆ ಅಧರಿಸಿ ಮಾಡಲಾಗಿತ್ತು. ಈ ಸಾಲ ಮನ್ನಾ ಯೋಜನೆ ಎಲ್ಲ ರೈತರಿಗೂ ಅನ್ವಯವಾಗಿರಲಿಲ್ಲ. ಮಾರ್ಚ್ 2022ಕ್ಕೆ ಕೊನೆಗೊಂಡಂತೆ ಮಾಡಲಾದ ಆಧ್ಯಯನದ ಪ್ರಕಾರ ಒಂಭತ್ತು ರಾಜ್ಯಗಳ ಪೈಕಿ ತೆಲಂಗಾಣದ ಶೇ.5, ಮಧ್ಯಪ್ರದೇಶದ ಶೇ.12, ಜಾರ್ಖಂಡ್ನ ಶೇ.13, ಪಂಜಾಬ್ನ ಶೇ.24, ಕರ್ನಾಟಕದ ಶೇ.38 ಮತ್ತು ಉತ್ತರ ಪ್ರದೇಶದ ಶೇ.52 ರೈತರ ಸಾಲಗಳು ಮಾತ್ರ ಮನ್ನಾ ಆಗಿದ್ದವು. ಇನ್ನು ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ 2018ರಲ್ಲಿ ಛತ್ತೀಸ್ಘಡದಲ್ಲಿ ಮತ್ತು 2020ರಲ್ಲಿ ಮಹಾರಾಷ್ಟ್ರದಲ್ಲಿ ಇತ್ತು. ಈ ಎರಡೂ ರಾಜ್ಯಗಳಲ್ಲಿ ಕ್ರಮವಾಗಿ ಶೇ. 100 ಮತ್ತು ಶೇ. 92ರಷ್ಟು ರೈತರ ಸಾಲಗಳು ಮನ್ನಾ ಆಗಿದ್ದವು. ಅದೇ, 2017ರಲ್ಲಿ ಮಹಾರಾಷ್ಟ್ರದಲ್ಲಿ 34,000 ಕೋಟಿ ರುಪಾಯಿಗಳ ವೆಚ್ಚದಲ್ಲಿ 67 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿತ್ತು, ಇದು ಅಂದಿಗೆ ಶೇ. 68ರಷ್ಟು ಮಾತ್ರ ಆಗಿತ್ತು ಎಂದು ತಿಳಿದು ಬಂದಿದೆ.
ಸಾಲ ಮನ್ನಾ ಯೋಜನೆ ಅನ್ವಯವಾಗಿದ್ದ ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಒಂಭತ್ತು ರಾಜ್ಯಗಳನ್ನು ಎಸ್ಬಿಐ ಸಂಶೋಧಕರ ತಂಡ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿತ್ತು. ಈ ಒಂಭತ್ತು ರಾಜ್ಯಗಳಲ್ಲಿ ಮನ್ನಾ ಮಾಡಲಾಗಿದ್ದ ಸಾಲದ ಒಟ್ಟು ಮೊತ್ತ 2.53 ಲಕ್ಷ ಕೋಟಿ ರುಪಾಯಿಗಳು. ಆಂಧ್ರ ಪ್ರದೇಶದಲ್ಲಿ ಶೇ 42ರಷ್ಟು ರೈತರು ಇದರಿಂದ ಲಾಭ ಪಡೆದಿದ್ದರು, ಶೇಕಡಾವಾರು ಇವರ ಸಂಖ್ಯೆ 92% ಆಗಿತ್ತು. ಆದರೆ ತೆಲಂಗಾಣದದಲ್ಲಿ ಈ ಸಾಲ ಮನ್ನಾ ಲಾಭ ಸಿಕ್ಕಿದ್ದು ಕೇವಲ ಶೇ. 5ರಷ್ಟು ರೈತರಿಗೆ ಮಾತ್ರ. 2014 ರಿಂದ ಮಾರ್ಚ್ 2022ರ ವರೆಗೆ ಮಾಡಿದ ಸಾಲ ಮನ್ನಾ ಯೋಜನೆಗಳ ಒಟ್ಟು ಲಾಭಾರ್ಥಿಗಳ ಸಂಖ್ಯೆ 3.7 ಕೋಟಿ. ಇದು ಸಾಲಗಾರರಾಗಿದ್ದ ರೈತರ ಸಂಖ್ಯೆಯಲ್ಲಿ ಶೇ. 50 ಮಾತ್ರ ಆಗಿದೆ ಎಂಬುದು ಎಸ್ಬಿಐ ತಂಡದ ಅಧ್ಯಯನವಾಗಿದೆ.
ಇನ್ನು ಅತಿಯಾದ ಪ್ರಚಾರ ಮತ್ತು ರಾಜಕೀಯ ಮೈಲೇಜುಗಳನ್ನು ಪಡೆದ ನಂತರವೂ ಈ ಸಾಲ ಮನ್ನಾ ಕೃಷಿ ಕ್ಷೇತ್ರದ ಮೇಲೆ ಮಾಡಬೇಕಾಗಿದ್ದ ಪರಿಣಾಮಗಳನ್ನು ಮಾಡಲೇ ಇಲ್ಲ. ಅದರ ಬದಲಾಗಿ ಅನೇಕ ರಾಜ್ಯಗಳಲ್ಲಿ ಸಾಲ ನೀಡಿಕೆಯಲ್ಲಿದ್ದ ಶಿಸ್ತು ನಾಶವಾಗಿ, ಅನೇಕ ಬ್ಯಾಂಕುಗಳು ಮತ್ತು ಅರ್ಥಿಕ ಸಂಸ್ಥೆಗಳು ಕೃಷಿ ಸಾಲ ನೀಡಿಕೆಯ ಬಗ್ಗೆ ಋಣಾತ್ಮಕ ನಿಲುವನ್ನು ತಳೆಯಲು ಕಾರಣವಾಯಿತು ಎಂದು ತಿಳಿದು ಬಂದಿದೆ.