ಉಡುಪಿ: ಕಳೆದೆರಡು ದಿನಗಳಿಂದ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ , ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಗೆಳೆಯರು ಸದ್ಯ ಪೊಲೀಸ್ ವಶದಲ್ಲಿದ್ದಾರೆ. ನಗರದ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ 207 ಸಂಖ್ಯೆಯ ಕೊಠಡಿಯಲ್ಲಿ ರೂಮ್ ಮಾಡಿದ್ದರೆ , ಇಬ್ಬರು ಗೆಳೆಯರಾದ ಪ್ರಶಾಂತ್ ಶೆಟ್ಟಿ ಮತ್ತು ಸಂತೋಷ್ ಮೇದಪ್ಪ ಪಕ್ಕದ 208 ನಂಬರ್ ನ ರೂಮ್ ನಲ್ಲಿದ್ದರು. ಸೋಮವಾರ ರಾತ್ರಿ ಗುಡ್ ನೈಟ್ ಹೇಳಿ ಮಲಗಿದ್ದ ಸಂತೋಷ್, ಮರುದಿನ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಘಟನೆ ನಡೆದ ಕ್ಷಣದಿಂದ ಸಂತೋಷ್ ಸ್ನೇಹಿತರು ಪೊಲೀಸರ ವಶದಲ್ಲಿದ್ದಾರೆ. ಓರ್ವ ಬೆಂಗಳೂರು ಮತ್ತೋರ್ವ ಕೊಡಗು ಮೂಲದ ಸ್ನೇಹಿತರ ಬಳಿ ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ.ಇಬ್ಬರಿಂದ ವಿವರವಾದ ಸ್ಟೇಟ್ ಮೆಂಟ್ ಕೂಡ ಪಡೆದುಕೊಂಡಿದ್ದಾರೆ.ಕಳೆದ ಎರಡು ದಿನಗಳಿಂದ” ನಿಗೂಢ”ವಾಗಿದ್ದ ಸ್ನೇಹಿತರು , ಎಲ್ಲೂ ಮಾಧ್ಯಮದ ಕಣ್ಣಿಗೆ ಬೀಳಲಿಲ್ಲ.ಆದರೆ ಮೃತ ಸಂತೋಷ್ ಕಾರನ್ನು ಮಹಜರು ಮಾಡುವಾಗ ಆತನ ಇಬ್ಬರು ಸ್ನೇಹಿತರು ಸಾರ್ವಜನಿಕವಾಗಿ ಕೆಲ ಹೊತ್ತು ಕಾಣಿಸಿಕೊಂಡರು. ಪೊಲೀಸ್ ಉನ್ನತ ಮೂಲ್ಲಗಳ ಪ್ರಕಾರ ಇವರಿಬ್ಬರು ಮುಗ್ಧರಾಗಿದ್ದು , ಸಂತೋಷ್ ಜೊತೆ ಚೆನ್ನಾಗಿಯೇ ಇದ್ದರು. ಸದ್ಯ ಪೊಲೀಸ್ ವಶದಲ್ಲಿರುವ ಇಬ್ಬರು ಸ್ನೇಹಿತರನ್ನು ಪೊಲೀಸರು ಇವತ್ತು ಅಥವಾ ನಾಳೆ ವಶದಿಂದ ಮುಕ್ತಗೊಳಿಸಬಹುದು ಎನ್ನಲಾಗುತ್ತಿದೆ.