
ಬೆಳ್ತಂಗಡಿ : ಕೇಂದ್ರ ಸರಕಾರ ಪ್ರತಿಯೊಂದು ವಿಚಾರಗಳಲ್ಲೂ ತಾವು ಮಾಡಿದ್ದೇ ಸರಿ, ಏನು ಮಾಡಿದರೂ ಜನ ಒಪ್ಪಿಕೊಳ್ಳುತ್ತಾರೆ ಎಂಬ ಭ್ರಮೆಯಲ್ಲಿತ್ತು. ಆದರೆ ಭಾರತದ ಯುವ ಜನತೆ ತಕ್ಕ ಪಾಠ ಕಲಿಸುವ ಮೂಲಕ ಪ್ರಜಾಪ್ರಭುತ್ವದ ನಿಜ ಅರ್ಥವನ್ನು ತಿಳಿಸಿಕೊಟ್ಟಿದ್ದಾರೆ. ನೀಟ್ ಪರೀಕ್ಷೆಯ ಅಕ್ರಮ ಹಾಗೂ 21 ವಿದ್ಯಾರ್ಥಿಗಳ ಸಾವಿನ ಬಳಿಕ ದೇಶಾದ್ಯಂತ ವ್ಯಕ್ತವಾದ ಆಕ್ರೋಶದ ಫಲವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನೀಟ್ ಪರೀಕ್ಷೆ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆಯಾದ ಹಿನ್ನೆಲೆ ದೇಶದಾದ್ಯಂತ ವಿದ್ಯಾರ್ಥಿಗಳು ನಡೆಸಿದ ಆಂದೋಲನದಿಂದ ಕೊನೆಗೂ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಿರುವುದು ಪ್ರಜಾಪ್ರಭುತ್ವದಲ್ಲಿ ಯುವ ಸಮೂಹಕ್ಕೆ ಸಂದ ಜಯವಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ವಿಶ್ವಾಸವನ್ನು ಮರುಸ್ಥಾಪಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಬೇಕು. ವಿದ್ಯಾರ್ಥಿಗಳ ಭವಿಷ್ಯ ಯಾವುದೇ ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗಬಾರದು ಎಂದು ದ.ಕ. ಜಿಲ್ಲಾ ಕೆ.ಡಿ. ಪಿ ಸದಸ್ಯರಾದ ಸಂತೋಷ್ ಕುಮಾರ್ ಲಾಯಿಲಾ ಜು.26 ರಂದು ತಿಳಿಸಿದರು.


