ಪುತ್ತೂರು ; ಕೋಟಿ ಚೆನ್ನಯ ಕಂಬಳದಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ಸಾನ್ಯ ಅಯ್ಯರ್ ಗೆ ಕಿರುಕುಳ ಆರೋಪಕ್ಕೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕಂಬಳ ಆಯೋಜಕರ ವಿರುದ್ದ ಗರಂ ಆಗಿರುವ ಹಿದೂಂಪರ ಸಂಘಟನೆಗಳು ಕಿರುಕುಳ ನೀಡಿದವರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿವೆ.
ಈ ಬಗ್ಗೆ ಮಾತನಾಡಿದ ಹಿಂದೂ ಮುಖಂಡ ದಿನೇಶ್ ಜೈನ್ ಜನವರಿ 28 ರಂದು ಪುತ್ತೂರು ಕಂಬಳದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದ ಎರಡು ಘಟನೆ ನಡೆದಿದೆ. ಚಿತ್ರನಟಿ ಸಾನ್ಯ ಅಯ್ಯರ್ ಗೆ ಕಿರುಕುಳ ನೀಡಲಾಗಿದೆ. ಅಲ್ಲದೆ ಇನ್ನೊಂದು ಕಡೆ ಹಿಂದೂ ಹೆಣ್ಣುಮಕ್ಕಳನ್ನು ಅಸಭ್ಯವಾಗಿ ಮೊಬೈಲ್ ನಲ್ಲಿ ವಿಡಿಯೋ ಮಾಡಲಾಗಿದ್ದು, ಎರಡೂ ಘಟನೆಯಲ್ಲಿ ಅನ್ಯಮತೀಯರೇ ಆರೋಪಿಗಳಾಗಿದ್ದಾರೆ ಎಂದಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಪುತ್ತೂರ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಈ ಘಟನೆ ನಡೆದಿರುವುದು ದುರಾದೃಷ್ಟಕರ, ದೇವರಗದ್ದೆಯಲ್ಲಿ ನಡೆದ ಕಂಬಳಕ್ಕೆ ಬರುವ ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ, ಕಂಬಳ ನೋಡಲು ಹೆಣ್ಣುಮಕ್ಕಳು, ಮಹಿಳೆಯರು ಹೆಚ್ಚಾಗಿ ಆಗಮಿಸುತ್ತಾರೆ, ಆದರೆ ಕೆಲವು ವ್ಯಕ್ತಿಗಳು ಇದಕ್ಕಾಗಿಯೇ ಕಂಬಳಕ್ಕೆ ಬಂದು ವಿಕೃತಿ ಮೆರೆಯುತ್ತಿದ್ದಾರೆ. ದೇವರಗದ್ದೆಯಲ್ಲಿ ನಡೆಯುವ ಕೋಟಿ-ಚೆನ್ನಯ ಕಂಬಳದಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು, ಆದರೆ ಕಂಬಳ ನಡೆಸಲು ಅವಕಾಶ ನೀಡಿದ ದೇವಸ್ಥಾನದ ವ್ಯವಸ್ಥಾನಪನಾ ಮಂಡಳಿ ಈ ವಿಚಾರವನ್ನು ಗಂಭೀರವಾಗಿ ತೆಗದುಕೊಳ್ಳಬೇಕು ಎಂದಿದ್ದಾರೆ.