ಬಂಟ್ವಾಳ: ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಕಟ್ಟೆ ಬಳಿಯ ಸಂಗಬೆಟ್ಟುವಿನಲ್ಲಿ ನೂತನ ಮನೆಯ ನಿರ್ಮಾಣದ ಸಂದರ್ಭದಲ್ಲಿ ಕಾರ್ಮಿಕರೊಬ್ಬರ ತಲೆಗೆ ಆಕಸ್ಮಿಕವಾಗಿ ಕಲ್ಲು ಬಿದ್ದ ಕಾರಣ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಇಂದು ನಡೆದಿದೆ.
ಸಿದ್ದಕಟ್ಟೆ ಮಂಚಕಲ್ಲು ನಿವಾಸಿ ಸೇಸಪ್ಪ ಗೌಡ ಅವರ ಮಗ ರಮಾನಂದ ಗೌಡ (30) ಮೃತಪಟ್ಟ ದುರ್ದೈವಿ..
ಸಿದ್ದಕಟ್ಟೆ ಬಳಿಯ ಸಂಗಬೆಟ್ಟುವಿನಲ್ಲಿ ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಈ ಮನೆ ನಿರ್ಮಾಣಕ್ಕಾಗಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ರಾಮಾನಂದ ಗೌಡ ಕಲ್ಲು ಕೆಲಸ ಮಾಡುತ್ತಿದ್ದು, ಇದ್ದಕ್ಕಿದ್ದಂತೆ ಮೇಲ್ಬಾಗದ ಲಿಂಟಲ್ ಕಲ್ಲು ಅಡಿಭಾಗದಲ್ಲಿದ್ದ ರಮಾನಂದ ಅವರ ತಲೆಯ ಮೇಲೆ ಬಿದ್ದಿದ್ದು, ತಲೆಬುರುಡೆಗೆ ತೀವ್ರ ಗಾಯವಾಗಿತ್ತು. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಇವರು ಸೇಸಪ್ಪಗೌಡರ ಇಬ್ಬರ ಪುತ್ರರಲ್ಲಿ ಹಿರಿಯವನಾಗಿದ್ದು, ಅವಿವಾಹಿತರಾಗಿದ್ದಲ್ಲದೆ ಮನೆಗೂ ಆಧಾರವಾಗಿದ್ದರು. ಬಂಟ್ವಾಳ ಗ್ರಾಮೀಣ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಮತ್ತು ಇತರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.