ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿಯ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರಕ್ಕೆ ಮುಂದೂಡಿದೆ.
ಇಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ನವೀನ್ ಸಿನ್ಹಾ ಮತ್ತು ಇಂದು ಮಲ್ಹೋತ್ರಾ ಅವರುಗಳು ರಾಗಿಣಿ ಹಾಗೂ ಶಿವಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದ್ದಾರೆ.
ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಟಿ ರಾಗಿಣಿ ಪರವಾಗಿ ವಕೀಲರಾದ ಶಾಹಿಲ್ ಭಾಲೈಕ್, ಸುಪ್ರಿಂ ಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಡಿಸೆಂಬರ್ 26 ರಂದು ಅಧಿಕೃತವಾಗಿ ಸ್ಕ್ರೂಟನಿ ಆಗಿದ್ದ ಜಾಮೀನು ಅರ್ಜಿ, ಮೊದಲು ಜನವರಿ 4ಕ್ಕೆ ಲಿಸ್ಟ್ ಆಗಿತ್ತು. ಇತ್ತ ಜಾಮೀನು ನೀಡದಂತೆ ಸಿಸಿಬಿ ಅರ್ಜಿ ಸಲ್ಲಿಸಿ ಮನವಿ ಮಾಡಿದೆ.
ಸಿಸಿಬಿ ಪರ ಸುಪ್ರಿಂ ಕೋರ್ಟ್ ವಕೀಲ ತುಷಾರ್ ಮೆಹತಾ ವಾದ ಮಂಡಿಸಿದ್ದು, ಹೈ ಕೋರ್ಟಿನಲ್ಲಿ ಉಲ್ಲೇಖಿಸಿದ್ದ ಅಂಶಗಳನ್ನೇ ಪುನಃ ಪ್ರಸ್ತಾಪಿಸಿ ಅರ್ಜಿ ಸಲ್ಲಿಕೆ ಮಾಡಿದ್ದರು. ಡ್ರಗ್ಸ್ ಸೇವನೆ ಅಷ್ಟೇ ಅಲ್ಲದೇ ಮಾರಾಟ ಮಾಡುತ್ತಿದ್ದ ಬಗ್ಗೆ ಹೇಳಲಾಗಿದೆ. ಆ ಕಾರಣಕ್ಕೆ ಇವರ ವಿರುದ್ಧ ಎನ್ಡಿಪಿಎಸ್ ಆಕ್ಟ್ 27 ಎ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸರ್ಕಾರಿ ವಕೀಲರು ಮನವಿ ಮಾಡಿದ್ದರು.
ಅಂದಹಾಗೇ ರಾಗಿಣಿ ದ್ವಿವೇದಿಯನ್ನು ಡ್ರಗ್ಸ್ ಸೇವನೆ ಮತ್ತು ಮಾರಾಟದ ಆರೋಪದಡಿ ಸೆಪ್ಟೆಂಬರ್ 3 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೇ ಡ್ರಗ್ಸ್ ಪ್ರಕರಣದಡಿ ಬಂಧನಕ್ಕೆ ಒಳಗಾಗಿದ್ದ ನಟಿ ಸಂಜನಾ ಗಲ್ರಾನಿಗೆ ಇತ್ತೀಚೆಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಅದರಂತೆ ಇಂದು ತಮಗೆ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ರಾಗಿಣಿಗೆ ಭಾರೀ ನಿರಾಸೆಯಾಗಿದೆ.