ಉಜಿರೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಪುಂಜಾಲ ಕಟ್ಟೆ – ಚಾರ್ಮಾಡಿ ತನಕ ನಡೆಯಲಿದ್ದು, 718 ಕೋಟಿ ರೂ. ಅನುದಾನ ಮಂಜೂರುಗೊಂಡಿದೆ. ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ಬೆಂಚ್ ಮಾರ್ಕಿಂಗ್ ಸೆಂಟ್ರಲ್ ಮಾರ್ಕಿಂಗ್, ಅಭಿವೃದ್ಧಿ ವೇಳೆ ತೆರವುಗೊಳ್ಳಬೇಕಾದ ಮರಗಳ ಸಮೀಕ್ಷೆಗಳು ನಡೆದಿದ್ದು, ಇವೆಲ್ಲವು ಅಪೂರ್ಣವಾಗಿವೆ. ಸರಕಾರದ ಆದೇಶದಂತೆ ತಿರುವುಗಳಲ್ಲಿ ಮರು ಸಮೀಕ್ಷೆ ನಡೆಸಬೇಕಾಗಿದೆ ಎಂದು ದ. ಕ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ವೈ. ಕೆ. ದಿನೇಶ್ ಕುಮಾರ್ ಹೇಳಿದರು.
ರಸ್ತೆ ಅಭಿವೃದ್ಧಿ ವೇಳೆ ತೆರವುಗೊಳ್ಳಬೇಕಾದ ಮರಗಳ ಕುರಿತು ಇಂದು ಬೆಳ್ತಂಗಡಿಯ ಅರಣ್ಯ ಇಲಾಖೆ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಸ್ತೆಯನ್ನು ಹೆಚ್ಚು ನೇರಗೊಳಿಸುವ ಉದ್ದೇಶದಿಂದ ಮರು ಸಮೀಕ್ಷೆಗೆ ಆದೇಶಿಸಲಾಗಿದೆ. ಈ ಹಿಂದೆ ಈ ಪ್ರದೇಶದಲ್ಲಿ 35 ಕಿ. ಮೀ. ರಸ್ತೆ ಗುರುತಿಸಲಾಗಿದ್ದು, ಇದು ನೇರಗೊಳ್ಳುವ ಕಾರಣ 33.1 ಕಿ. ಮೀ.ಗೆ ಇಳಿಕೆಗೊಳ್ಳಲಿದೆ. ಗುರುವಾಯನ ಕೆರೆಯಿಂದ ಉಜಿರೆಯ ಚಾರ್ಮಾಡಿ ರಸ್ತೆ ಪೆಟ್ರೋಲ್ ಬಂಕ್ ತನಕ 9.5 ಕಿ. ಮೀ. ರಸ್ತೆ ದ್ವಿಪಥವಾಗಿ ನಿರ್ಮಾಣಗೊಳ್ಳಲಿದ್ದು, ಇದಕ್ಕೆ ಸರ್ವಿಸ್ ರಸ್ತೆ ಇರುತ್ತದೆ.
ನಗರ ಪ್ರದೇಶದಲ್ಲಿ ರಸ್ತೆ ವ್ಯಾಪ್ತಿ 30 ಮೀ. ಇರಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಯ ವ್ಯಾಪ್ತಿ 18 ರಿಂದ 20 ಮೀ. ಇರಲಿದೆ. ಜುಲೈ 11 ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 88 ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ಧಿ ವೇಳೆ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲು ಮೀಸಲಿರಿಸಲಾಗಿದೆ. ಈ ರಸ್ತೆಯ ಅಭಿವೃದ್ದಿಗೆ ಹೆದ್ದಾರಿ ಇಲಾಖೆಗೆ 50 ಎಕರೆಯಷ್ಟು ರಸ್ತೆ ವ್ಯಾಪ್ತಿಗೆ ಒಳಪಟ್ಟ ಭೂಮಿಯ ಅಗತ್ಯವಿದೆ. ಈ ಎಲ್ಲ ವಿಚಾರಗಳ ಸಂಪೂರ್ಣ ಚಿತ್ರಣ ಅಂತಿಮ ಹಂತದ ಸಮೀಕ್ಷೆಗಳು ನಡೆದ ಬಳಿಕವಷ್ಟೇ ತಿಳಿದು ಬರಲಿದೆ. ಮರು ಸಮೀಕ್ಷೆ ಕೂಡಲೇ ಆರಂಭವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎ. ಇ. ಇ. ಕೃಷ್ಣಕುಮಾರ್ ತಿಳಿಸಿದರು.
.