ಪಂಬಾ: ಪ್ರತಿವರ್ಷದ ಸಂಪ್ರದಾಯದ ಮಕರವಿಳಕ್ಕು ಋತುವಿನ ಪೂಜಾ ಕೈಂಕರ್ಯ ಮತ್ತು ದರ್ಶನಕ್ಕೆ ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಇಂದು ಸಂಜೆ ತೆರೆಯಲಾಯಿತು.
ಇಂದು ಸಂಜೆ ನಡೆದ ಸಾಂಪ್ರದಾಯಿಕ ಪೂಜೆಯ ಬಳಿಕ ಅರ್ಚಕರು, ಆಡಳಿತ ಮಂಡಳಿ ಮತ್ತು ದೇವಸ್ಥಾನದ ಸಿಬ್ಬಂದಿಗಳು ದೇವರ ದರ್ಶನ ಪಡೆದಿದ್ದು, ನಾಳೆಯಿಂದ ಮುಂದಿನ 62 ದಿನಗಳ ಕಾಲ ಸ್ವಾಮಿ ಅಯ್ಯಪ್ಪ ದೇಗುಲವು ದರ್ಶನಾರ್ಥಿಗಳಿಗೆ ತೆರೆಯಲಿದೆ. ಕೊರೋನಾ ಸಂಧರ್ಭ ಕಾರಣ ಪ್ರತಿದಿನ ಕೇವಲ 1000 ಭಕ್ತರಿಗೆ ಮಾತ್ರ ಅಯ್ಯಪ್ಪ ದರ್ಶನಕ್ಕೆ ಅವಕಾಶವಿದ್ದು, ಎಲ್ಲರೂ ಕೋವಿಡ್ ನೆಗೆಡಿವ್ ಪ್ರಮಾಣಪತ್ರ ಕೊಂಡೊಯ್ಯುವುದು ಕಡ್ಡಾಯವಾಗಿದೆ.
ದಿನಂಪ್ರತಿ ಕೇವಲ ಸಾವಿರ ಭಕ್ತರಿಗೆ ಅವಕಾಶವಿದ್ದರೂ ವಾರಾಂತ್ಯದ ಎರಡು ದಿನ ತಲಾ ಎರಡು ಸಾವಿರ ಭಕ್ತರಿಗೆ ಸ್ವಾಮಿ ದರ್ಶನಕ್ಕೆ ಅನುಕೂಲ ಮಾಡಿಕೊಡಲು ದೇವಾಲಯದ ಆಡಳಿತ ಮಂಡಳಿಯು ತೀರ್ಮಾನಿಸಿದೆ.
ಅಯ್ಯಪ್ಪ ದರ್ಶನಕ್ಕೆ ಬರುವ ಭಕ್ತರು ಶಬರಿಮಲೆಯಲ್ಲಿ ತಂಗಲು ಯಾವುದೇ ಅವಕಾಶ ಇರುವುದಿಲ್ಲ. ಸ್ವಾಮಿಯ ದರ್ಶನ ಮಾಡಿಕೊಂಡು ಎಲ್ಲರೂ ಅಂದೇ ವಾಪಸಾಗಬೇಕು ಎಂದು ಕಟ್ಟಳೆ ಹಾಕಲಾಗಿದೆ.
ಈ ಮಧ್ಯೆ ಪಾಂಬಾ ಮತ್ತು ನೀಳಕ್ಕಲ್ನಲ್ಲಿ ಕೋವಿಡ್ ತಪಾಸಣಾ ಶಿಬಿರಗಳನ್ನು ತೆರೆಯಲಾಗಿದ್ದು, ಭಕ್ತರು ಅದರ ಉಪಯೋಗ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.