ಮಂಗಳೂರು: ಆಡಳಿರೂಢ ಪಕ್ಷದ ಶಾಸಕರೊಬ್ಬರು ಮುಖ್ಯಮಂತ್ರಿ ಸ್ಥಾನವನ್ನೇ ಏಲಂಗೆ ಇರಿಸಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಮತ್ತು ಮಂಗಳೂರು ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಮಾತನಾಡಿದ ಖಾದರ್, ಇದು ಮುಖ್ಯಮಂತ್ರಿ ಸ್ಥಾನಕ್ಕೆ ಮಾಡಿದ ಅಪಮಾನ ಎಂದು ತಿಳಿಸಿದ್ದಾರೆ. ಅಲ್ಲದೇ, ರಾಜ್ಯದ ಜನರು ತಲೆತಗ್ಗಿಸುವಂತೆ ಮಾಡಲಾಗಿದೆ. ರಾಜ್ಯದ ಘನತೆಗೆ ಬಿಜೆಪಿ ನಾಯಕರು ಧಕ್ಕೆ ತರುತ್ತಿದ್ದಾರೆ ಎಂದು ಶಾಸಕ ಖಾದರ್ ಟೀಕಿಸಿದ್ದಾರೆ.
ಪಿಎಸ್ ಐ ಪರೀಕ್ಷೆ ಗೋಲ್ ಮಾಲ್ ಪ್ರಕರಣದಲ್ಲಿ ಪಬ್ಲಿಕ್ ಡೊಮೈನಿನಲ್ಲಿ ಇರುವ ವಿಚಾರವನ್ನೇ ಪ್ರಿಯಾಂಕ್ ಖರ್ಗೆ ಹೇಳಿದ್ದರೂ ರಾಜ್ಯ ಸರಕಾರ ನೋಟಿಸ್ ನೀಡಿದೆ. ಈಗ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಿರುವವರ ವಿರುದ್ದ ಸರಕಾರ ನೋಟಿಸ್ ಜಾರಿ ಮಾಡುತ್ತಾ ಎಂದು ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿದ್ದು ರಾಜ್ಯದ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಬಿಜೆಪಿ ಅಂಗ ಸಂಸ್ಥೆಗಳು ಯತ್ನಿಸುತ್ತಿವೆ ಎಂದು ಖಾದರ್ ಆರೋಪಿಸಿದ್ದಾರೆ.