ಸಂಪಾಜೆ: ಮಾರಕಾಸ್ತ್ರಗಳನ್ನು ಹಿಡಿದು ಬೆದರಿಸಿ ದರೋಡೆ ನಡೆಸಿ ಪರಾರಿಯಾದ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಎಂಬಲ್ಲಿ ನಿನ್ನೆ ರಾತ್ರಿ 8.30ಕ್ಕೆ ನಡೆದಿದೆ.
ಮಾರಕಾಸ್ತ್ರ ಸಜ್ಜಿತ ದರೋಡೆಕೋರರ ತಂಡ ಸಂಪಾಜೆಯ ಚಟ್ಟೆಕಲ್ಲಿನ ಅಂಬರೀಶ್ ಭಟ್ ಅವರ ಅಂಬಾಶ್ರಮ ಮನೆಗೆ ನುಗ್ಗಿ ಅತ್ತೆ ಹಾಗೂ ಸೊಸೆಯನ್ನು ಮಚ್ಚು ಹಿಡಿದು ಬೆದರಿಸಿ 100 ಗ್ರಾಂ. ಚಿನ್ನ ಹಾಗೂ 1.50 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಂಬರೀಶ್ ಭಟ್ ಸಂಪಾಜೆಯ ಜನರಿಗೆ ಹೆಚ್ಚು ಚಿರಪರಿಚಿತ ದೇವರ ಪೂಜಾ ಕಾರ್ಯ, ಜ್ಯೋತಿಷ್ಯ ಶಾಸ್ತ್ರದಲ್ಲಿ ಅವರ ಕುಟುಂಬ ವಂಶಪಾರಂಪರ್ಯದಿಂದಲೇ ಬಹಳಷ್ಟು ಹೆಸರನ್ನು ಗಳಿಸಿದೆ. ಅಂಬರೀಶ್ ಭಟ್ ಕೂಡ ಸಮಾಜದಲ್ಲಿ ತಮ್ಮ ಧಾರ್ಮಿಕ ಕಾರ್ಯಗಳಿಂದ ಗುರುತಿಸಿಕೊಂಡವರು. ಅವರ ಇಬ್ಬರು ಪುತ್ರರು ಶ್ರೀವತ್ಸ ಹಾಗೂ ಶ್ರೀನಿಧಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನೀಯರ್ ಉದ್ಯೋಗದಲ್ಲಿದ್ದಾರೆ. ಇತ್ತೀಚೆಗಷ್ಟೇ ಶ್ರೀವತ್ಸ ತಮ್ಮ ಪತ್ನಿ, ಇಬ್ಬರು ಅವಳಿ ಮಕ್ಕಳೊಂದಿಗೆ ಊರಿಗೆ ಬಂದಿದ್ದರು.
ಕಳ್ಳತನ ನಡೆದ ನಿನ್ನೆಯ ದಿನ ಶ್ರೀವತ್ಸ ಹಾಗೂ ಅಂಬರೀಶ್ ಭಟ್ ಅವರು ಮನೆಯಲ್ಲಿ ಇರಲಿಲ್ಲ. ಈ ವೇಳೆ ಕಳ್ಳರ ಗುಂಪೊಂದು ಮನೆಗೆ ನುಗ್ಗಿದೆ. ಮೊದಲು ಬಂದವರೇ ಶ್ರೀವತ್ಸ ಅವರ ಪತ್ನಿಯ ತಾಳಿ ಸರವನ್ನು ಕಿತ್ತುಕೊಂಡಿದ್ದಾರೆ. ತೊಟ್ಟಿಲಲ್ಲಿ ಮಲಗಿದ್ದ ಅವಳಿ ಮಕ್ಕಳಿಗೆ ಏನೂ ಮಾಡಬೇಡಿ ಎಂದು ಮನೆಯವರು ಗೊಗರೆದಿದ್ದಾರೆ. ಎಳನೀರು ಕೊಚ್ಚುವ ಮಚ್ಚು ಹಿಡಿದಿದ್ದ ದರೋಡೆಕೋರರು ಮನೆಯ ಬೀರುವಿನ ಕೀಲಿ ಕೈ ನೀಡುವಂತೆ ಹೇಳಿದ್ದಾರೆ. ಜೀವ ಭಯದಿಂದ ಮಹಿಳೆಯರು ಕೀನೀಡಿದ್ದಾರೆ ಅದರಲ್ಲಿದ್ದ ಚಿನ್ನ ಹಾಗೂ ನಗದನ್ನು ದೋಚಿ ಕತ್ತಲಲ್ಲಿ ಪರಾರಿಯಾಗಿದ್ದಾರೆ. ದರೋಡೆಕೋರರು ತಮಿಳು ಮಾತನಾಡುತಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಂಗಳೂರಿನಿಂದ ಉನ್ನತ ಮಟ್ಟದ ಪೊಲೀಸ್ ತಂಡ ಈಗಾಗಲೇ ಅಂಬಾಶ್ರಮಕ್ಕೆ ಬಂದು ತನಿಖೆ ನಡೆಸಿದ್ದಾರೆ. ಶ್ವಾನ ದಳ, ಬೆರಳಚ್ಚು ತಂಡಗಳು ಈಗಾಗಲೇ ತನಿಖೆ ನಡೆಸಿದ್ದು ಇದೀಗ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.