ಕೊಡಗು: ನಿವೃತ್ತಿ ನಂತರದ ಬದುಕು ಆರಾಮಾಗಿರಲಪ್ಪ ಎನ್ನುವವರ ಮಧ್ಯೆ ದಸರಾ ಅಂಬಾರಿ ಹೊರುವ ಕಾಯಕದಿಂದ ನಿವೃತ್ತಿ ಪಡೆದ ಅರ್ಜುನ ಆನೆ ಹೊಸ ಕಾಯಕ ಆರಂಭಿಸಿದೆ. ಅಂಬಾರಿ ಹೊರದಿದ್ದರೇನು, ನಾನು ಮಾತ್ರ ಸುಮ್ಮನಿರಲ್ಲ ಎಂದು ಅರ್ಜುನ ಈಗ ಪುಂಡಾನೆಗಳನ್ನ ಸೆರೆ ಹಿಡಿಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ.
ವಯಸ್ಸಿನ ಕಾರಣಕ್ಕೆ ಅರ್ಜುನನಿಗೆ ಈ ಬಾರಿ ಅಂಬಾರಿ ಹೊರುವುದರಿಂದ ಮುಕ್ತಿ ನೀಡಲಾಗಿತ್ತು. ಹೀಗಾಗಿ ಮತ್ತಿಗೋಡು ಆನೆ ಶಿಬಿದರಲ್ಲೇ ಅರ್ಜುನನಿದ್ದ. ಆದರೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪದ ಹೊಸೂರು, ಬೆಟ್ಟಗೇರಿ ಹಾಗೂ ದೇವರಪುರ ಗ್ರಾಮಗಳ ಸುತ್ತಮುತ್ತ ಪುಂಡಾನೆಯೊಂದು ಕಾಫಿತೋಟಗಳಲ್ಲಿ ವರ್ಷಗಳಿಂದಲೂ ಮನಸ್ಸೋ ಇಚ್ಚೆ ಓಡಾಡಿ ದಾಂಧಲೆ ನಡೆಸುತ್ತಾ ಜನರಿಗೆ ತೀವ್ರ ತೊಂದರೆ ನೀಡುತ್ತಿತ್ತು.
ಹೀಗಾಗಿ ಇದನ್ನು ಸೆರೆ ಹಿಡಿಯುವಂತೆ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಇದಕ್ಕೆ ಸರ್ಕಾರ ಸಮ್ಮತಿ ಸೂಚಿಸಿದ ಪರಿಣಾಮ ಅರ್ಜುನ ಮಿತ್ರರಾದ ಕೃಷ್ಣ, ಗೋಪಾಲಸ್ವಾಮಿ, ಗಣೇಶ ಮತ್ತು ಹರ್ಷ ಆನೆಗಳ ಒಡಗೂಡಿ ಕಾರ್ಯಚರಣೆ ನಡೆಸಿ ಭಾರೀ ಗಾತ್ರದ ಪುಂಡಾನೆಯನ್ನು ಸೆರೆ ಹಿಡಿದು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಸಾಗಿಸಲು ನೆರವಾಗಿದೆ.