ಚಿತ್ರದುರ್ಗ : ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಆರೋಪಿಗಳನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ರೇಣುಕಾಸ್ವಾಮಿ ಕೊಲೆಯಾದ ಕಾರ್ ಶೆಡ್ ನಲ್ಲಿ ಸ್ಥಳ ಮಹಜರು ಮಾಡಿಸಲಾಯಿತು. ಇನ್ನು ಇವತ್ತು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆ ತಂದ ಆರೋಪಿಗಳನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಸ್ಥಳ ಮಹಜರು ನಡೆಸಲಾಯಿತು.
ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆ ತಂದ ಆರೋಪಿ ಚಿತ್ರದುರ್ದ ರಘುನನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಯಿತು.ಆರೋಪಿಗಳು ಚಿತ್ರದುರ್ಗದ ಚಳ್ಳಕೆರೆಯ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಆಟೋದಲ್ಲಿ ಚಿತ್ರದುರ್ಗದ ಹೊರ ವಲಯಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಚಿತ್ರದುರ್ಗ ಮೂಲದ ಜಗದೀಶ್, ಅನು, ರವಿ ಹಾಗೂ ರಾಜು ಎಂಬ ಆರೋಪಿಗಳು ರಘುಗೆ ಸಹಕರಿಸಿದ್ದರು. ಇಂದು ರವಿ ಚಿತ್ರದುರ್ಗ ಡಿವೈಎಸ್ಪಿ ಮುಂದೆ ಶರಣಾಗಿದ್ದಾನೆ. ಉಳಿದ ಇಬ್ಬರು ನಾಪತ್ತೆಯಾಗಿದ್ದಾರೆ.
ಚಿತ್ರದುರ್ಗದ ಹೊರವಲಯದಲ್ಲಿ ಆಟೋದಿಂದ ನಂತರ ರೇಣುಕಾಸ್ವಾಮಿಯನ್ನು ಕಾರಿಗೆ ಶಿಫ್ಟ್ ಮಾಡಿದ್ದಾರೆ. ಬಾಡಿಗೆಗೆ ಎಂದು ಹೇಳಿ ಕಾರು ಚಾಲಕ ರವಿಯನ್ನು ಕರೆಸಿಕೊಂಡಿದ್ದರು. ದರ್ಶನ್ ಭೇಟಿ ಮಾಡಿಸುತ್ತೇನೆ ಎಂದು ರಘು ರೇಣುಕಾ ಸ್ವಾಮಿಗೆ ನಂಬಿಸಿದ್ದ ಎನ್ನಲಾಗಿದೆ. ದರ್ಶನ್ ಭೇಟಿ ಮಾಡಲು ರೇಣುಕಾ ಸ್ವಾಮಿ ಖುಷಿಯಿಂದ ಹೋಗಿದ್ದ. ಹಾಗೇ ಹೋದವನು ಕೊಲೆಯಾದದ್ದು ದುರಂತ.