ದಾವಣಗೆರೆ : ಡಿಕೆ ಶಿವಕುಮಾರ್ ಹಾಗು ಕಾಂಗ್ರೆಸ್ ವಿರುದ್ಧ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ. ಸರಣಿ ಟ್ವೀಟ್ ಮೂಲಕ ಡಿಕೆಶಿಗೆ ಕುಟುಕುವ ಮೂಲಕ ಸಿದ್ದರಾಮಯ್ಯನವರಿಗೆ ಡಿಕೆಶಿ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ. ಎದುರಾಳಿಗಳ ವಿರುದ್ಧ ರಣರಂಗದಲ್ಲಿ ಹೋರಾಡುವ ಬದಲು ” ವ್ಯವಸ್ಥಿತ ಜಾಲ” ರೂಪಿಸಿಕೊಂಡು ಖೆಡ್ಡಾಕ್ಕೆ ಬೀಳಿಸಲು ನುರಿತ ತಂಡವನ್ನು ಕಟ್ಟಿಕೊಂಡಿದ್ದಾರೆ.
ಹಗಲು ಕಂಡು ಇರಳಿನಲ್ಲಿ ಬಾವಿಗೆ ಬೀಳಬೇಡಿ ಸಿದ್ದರಾಮಯ್ಯ ನವರೇ! ಕುರ್ಚಿಗಾಗಿ ಏನು ಬೇಕಾದರೂ ಮಾಡುವ ಜಾಯಮಾನ ನಮ್ಮದು ಎಂಬುದನ್ನು ” ಬಂಡೆಯ ” ಇತಿಹಾಸವೇ ಹೇಳುತ್ತದೆ. ಮುಂದಿನ ದಿನಗಳಲ್ಲಿ ಇದು ನಿಮ್ಮ ಕೊರಳಿಗೆ ಉರಳಾದರೂ ಅಚ್ಚರಿಯಿಲ್ಲ. ಬೇಗ ಎಚ್ಚೆತ್ತುಕೊಳ್ಳಿ ಸಿದ್ದರಾಮಯ್ಯರೇ! 2023 ರ ಚುನಾವಣೆಯಲ್ಲಿ ಆ ಮಹಾನ್ ನಾಯಕನಿಗೆ ನೀವೇ ಪ್ರಬಲ ಸ್ಪರ್ಧಿ. ನಿಮಗೆ ಗೊತ್ತಿಲ್ಲದಂತೆಯೇ ಮುಗಿಸಲು ಯಾವುದಾದರೂ ಹೊಸ ನಾಟಕ ಸೃಷ್ಟಿಸಬಹುದು. ಅಧಿಕಾರಕ್ಕಾಗಿ ಏನನ್ನೂ ಮಾಡದೇ ಬಿಡುವವರಲ್ಲ ” ಸ್ವಯಂಘೋಷಿತ ಡೈನಾಮಿಕ್ ಬಂಡೆ” ಅಂತ ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
ಹಾಗೇ ಮಾನ್ಯ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರೇ ನಿಮ್ಮ ಪಕ್ಷದಲ್ಲೇ ಕೂತಿರುವ ” ಆ ಮಹಾನ್ ನಾಯಕ ” ಮುಂದೊಂದು ದಿನ ನಿಮಗೂ ಕೂಡ ಖೆಡ್ಡಾ ತೋಡಬಹುದು. ಬೆನ್ನಿಗೆ ಚೂರಿ ಇರಿಯುವ ಮೊದಲು ಯಾವುದಕ್ಕೂ ಹುಷಾರು! ಅಧಿಕಾರದ ಹಪಾಹಪಿತನಕ್ಕೆ ಬಿದ್ದಿರುವ “ಬಂಡೆ” ಈಗ ಎಲ್ಲೋ ಕುಳಿತು ಇನ್ನೆಲ್ಲೋ ಬಾಂಬ್ ಸಿಡಿಸುವ ಕಲೆಯನ್ನು ರಕ್ತಗತ ಮಾಡಿಕೊಂಡಿದೆ.
ಕಾಂಗ್ರೆಸ್ ಪಕ್ಷದ ನಾಯಕರುಗಳೇ ದೂರುದಾರರು, ತನಿಖಾಧಿಕಾರಿಗಳು, ವಿಚಾರಣಾಧಿಕಾರಿಗಳು, ನ್ಯಾಯಾಧೀಶರು ಆಗುವುದು ಬೇಡ ನಮ್ಮ ಸರ್ಕಾರ ಮುಕ್ತ ಮತ್ತು ನ್ಯಾಯ ಸಮ್ಮತ ತನಿಖೆ ನಡೆಸಲು ಸಿದ್ಧವಿದೆ. ನೆಲದ ಕಾನೂನಿನ ಮುಂದೆ ಎಲ್ಲರೂ ಸಮಾನರು. ನಿಮ್ಮ ಕಾಲದಲ್ಲಿ ಭ್ರಷ್ಟಾಚಾರದ ಗಂಗೋತ್ರಿಯೇ ಹರಿದಾಡಿತ್ತು ಎಂಬುದನ್ನು ಮರೆಯಬೇಡಿ ಅಂದಿದ್ದಾರೆ.