ಕೊಲ್ಲಂ: ಕೇರಳದ ಯುವ ವೈದ್ಯೆ ವಿಸ್ಮಯ ನಾಯರ್ ಅವರ ಆತ್ಮಹತ್ಯೆ ಪ್ರಕರಣ ಇಡೀ ಕೇರಳ ರಾಜ್ಯದಲ್ಲಿ ಸಂಚಲನವನ್ನುಂಟು ಮಾಡಿತ್ತು. 2021 ಜೂನ್ 21ರ ಸೋಮವಾರ ಬೆಳಗ್ಗೆ ಕೊಲ್ಲಂನ ಗಂಡನ ಮನೆಯಲ್ಲಿ ವಿಸ್ಮಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗಂಡನ ಹಣದಾಹಕ್ಕೆ ವಿಸ್ಮಯ ಬಲಿಯಾಗಿದ್ದರು. ಈ ಪ್ರಕರಣದಲ್ಲಿ ಬಂಧಿಯಾಗಿದ್ದ ಪತಿ ಕಿರಣ್ ಕುಮಾರ್ ಇದೀಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾನೆ. ಆದರೆ ಈ ಪ್ರಕರಣದ ತಾಜಾ ಬೆಳವಣಿಗೆ ಎಂಬಂತೆ, ಮೃತಪಟ್ಟಿರುವ ವಿಸ್ಮಯ ನಾಯರ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆಯಲಾಗಿದ್ದು, ಇದರಿಂದ ಆಘಾತಗೊಂಡಿರುವ ಸಂಬಂಧಿಕರು ಈ ಪ್ರಕರಣದ ವಿರುದ್ಧ ದೂರು ದಾಖಲಿಸಿದ್ದಾರೆ.
ಫೇಸ್ ಬುಕ್ ಖಾತೆ ಪ್ರೊಫೈಲ್ ನಲ್ಲಿ ವಿಸ್ಮಯ ಫೋಟೋ ಹಾಕಿದ್ದು, ವಿಸ್ಮಯ ವಿಜಿತ್ ಹೆಸರಿನ ಮೂಲಕ ಖಾತೆ ತೆರೆಯಲಾಗಿದೆ. 800 ಮಂದಿ ಸ್ನೇಹಿತರಿರುವ ಈ ಖಾತೆಯಲ್ಲಿ ವಿಸ್ಮಯ ಸಹೋದರ ವಿಜಿತ್ ಅಥವಾ ಅತ್ತಿಗೆ ರೇವತಿಯಾಗಲಿ ಫ್ರೆಂಡ್ ಲೀಸ್ಟ್ ನಲ್ಲಿ ಇಲ್ಲ. ವಿಸ್ಮಯ ಹೆಸರಿನ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಬೆನ್ನಲ್ಲೇ ಸಂಬಂಧಿಕರು ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿರುತ್ತಾರೆ.
ವಿಸ್ಮಯ ಪ್ರಕರಣ ವಿಚಾರಣೆ ವೇಳೆ ವಿಸ್ಮಯ ತಂದೆ ನಿರ್ವಹಿಸದ ಇನ್ಸ್ಟಾಗ್ರಾಮ್ ಖಾತೆಯ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿದೆ. ಇದೇ ಆಧಾರದ ಮೇಲೆ ಸಂಬಂಧಿಕರು ಕೂಡ ದೂರು ದಾಖಲಿಸಿದ್ದು, ಇದೀಗ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇರಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.