ಮಲ್ಪೆ: ಹರಿಯುವ ನದಿಯಲ್ಲಿ ನೀರಿನ ಅಲೆಗಳು ಸುಮಧುರ ಸಂಗೀತದಂತೆ ಕೇಳುತ್ತದೆ ಎಂದು ಕವಿಗಳು ವರ್ಣಿಸುವ ಸಾಲುಗಳನ್ನು ಓದಿದ್ದೇವೆ. ನಿಜಕ್ಕೂ ನದಿಯಿಂದ ಸಂಗೀತ ಸ್ವರಗಳು ಕೇಳಿದರೆ ಹೇಗಿರುತ್ತೆ? ಎನ್ನುವ ಅಪರೂಪದ ಅನುಭವ ಉಡುಪಿಯ ಜನರಿಗೆ ಉಂಟಾಗಿದೆ. ತ್ರಿವೇಣಿ ಸಂಗಮದೊಂದಿಗೆ ಸಮುದ್ರ ರಾಜನಲ್ಲಿ ಲೀನವಾಗುವ ನದಿಯಲ್ಲಿ ದೋಣಿಯಲ್ಲಿ ವೀಣಾ ವಾದನ ಪ್ರಯೋಗ ಮೊದಲ ಬಾರಿ ನಡೆಯಿತು. ರಾಷ್ಟ್ರಮಟ್ಟದ ಖ್ಯಾತಿಯ ವೀಣಾ ವಾದಕಿ ಉಡುಪಿಯ ವಿದುಷಿ ಪವನ ಆಚಾರ್ಯ ಇದನ್ನು ನಡೆಸಿಕೊಟ್ಟದ್ದು ವಿಶೇಷ.
ಇದು ನಡೆದದ್ದು ಶ್ರೀ ದುರ್ಗಾದೇವಿ ಮಹಾಕಾಳಿ ಅಮ್ಮನವರ ದೇವಸ್ಥಾನ ಕೋಡಿಬೆಂಗ್ರೆಯಲ್ಲಿ. 15 ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸ ಪ್ರಯುಕ್ತ ಇದನ್ನು ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಎದುರಿನ ಯಜ್ಞ ಕುಂಡದಲ್ಲಿ ವೇದ ಮೂರ್ತಿ ವಾಗೀಶ ಶಾಸ್ತ್ರೀ ಪಾವಂಜೆ ನೇತೃತ್ವದಲ್ಲಿ ಚಂಡಿಕಾಯಾಗದ ವೇದಗಳ ಘೋಷವಾದರೆ ನದಿಯಲ್ಲಿ ಪವನ ಆಚಾರ್ಯರ ವೀಣೆಯ ಝೇಂಕಾರದ ಅನುರಣನ ಮನಸೂರೆಗೊಂಡಿತು.
ತ್ರಿಶಕ್ತಿ ಸ್ವರೂಪಿಣಿ ದೇವಿಯ ಪ್ರಿತ್ಯರ್ಥ ಇಲ್ಲಿನ ಸೀತಾ ,ಸ್ವರ್ಣ ಮತ್ತು ಮಡಿಸಾಲು ನದಿಯ ಸಂಗಮ ಸ್ಥಳವಾದ ಕೋಡಿ ನದಿ ತೀರದಲ್ಲಿ ದೋಣಿಯಲ್ಲಿ ವೀಣಾ ವಾದನಕ್ಕಾಗಿ ವೇದಿಕೆಯೊಂದನ್ನು ಮಾಡಿದ್ದರು. ಹಲವಾರು ಶಾಸ್ತ್ರೀಯ ರಾಗದ ಅನೇಕ ಗೀತೆಯನ್ನು ವಿದುಷಿ ಪವನ ಆಚಾರ್ಯರು ವೀಣೆಯಲ್ಲಿ ನಾದ ವನ್ನು ಹೊರಹೊಮ್ಮಿಸಿದ್ದನ್ನು ಕೇಳಿ ಇಲ್ಲಿನ ಜನರು ತನ್ಮಯರಾದರು.