ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಂಗಳೂರಿನ ಬೋಳದ ರಂಜೇಶ್ ಶೆಟ್ಟಿ ಅವರ ಕಣ್ಣೀರಿನ ಕಥೆ ಸಾಕಷ್ಟು ವೈರಲ್ ಆಗಿತ್ತು. ರಂಜೇಶ್ ಶೆಟ್ಟಿ ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಕೊರೊನಾ ಪಾಸಿಟಿವ್ ಬಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಐಸಿಯುವಿಗೆ ದಾಖಲು ಮಾಡಲಾಗಿತ್ತು.
ರಂಜೇಶ್ ಶೆಟ್ಟಿ ಪತ್ನಿ ಗೀತಾ ಹಣಹೊಂದಿಸಲು ಸಾಕಷ್ಟು ತ್ರಾಸಪಟ್ಟು ನೆರವಿಗೆ ಕೈಚಾಚಿದ್ದರು. ಈ ವೇಳೆ ಸಾಮಾಜಿಕ ಕಾರ್ಯಕರ್ತ ಆಸಿಫ್ ತಮ್ಮ ಮೊಬೈಲ್ನಲ್ಲಿ ಗೀತಾ ಅವರ ಮನವಿಯನ್ನು ವೀಡಿಯೋ ಮಾಡಿ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆಯೊಂದಿಗೆ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದರು. ಹಲವಾರು ಮಂದಿ ಧರ್ಮ ಜಾತಿಗಳ ಎಲ್ಲೆಮೀರಿ ಗೀತಾ ಮನವಿಗೆ ಸ್ಪಂದಿಸಿದ್ದು, 24 ಗಂಟೆಗಳಲ್ಲಿ 14 ಲಕ್ಷ ರೂ ನೀಡುವ ಮೂಲಕ ಸ್ಪಂದಿಸಿದ್ದರು.
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವೈಯಕ್ತಿಕ ನೆಲೆಯಿಂದ 50 ಸಾವಿರ ರೂ. ನೀಡಿದ್ದರು . ಬುಧವಾರ ಬೆಳಗ್ಗೆ ಸಂಘದ ವತಿಯಿಂದ ಇನ್ನೂ 25 ಸಾವಿರ ರೂ.ಗಳನ್ನು ನೀಡಿದ್ದರು. ಆದರೆ ಈ ಎಲ್ಲಾ ಮಾನವೀಯ ಪ್ರಯತ್ನಗಳಿಗೆ ರಂಜೇಶ್ ಶೆಟ್ಟಿ ಸಾವಿನಿಂದ ಸೋಲಾಗಿದೆ.
ಗಂಭೀರ ಸ್ಥಿತಿಯಲ್ಲಿದ್ದ ರಂಜೇಶ್ ಶೆಟ್ಟಿ ಉಳಿಸಿಕೊಳ್ಳಬೇಕೆಂಬ ಗೀತಾ ಅವರ ಮನವಿ ವಿಧಿಗೆ ಕೇಳಿಸಲೇ ಇಲ್ಲ. ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಗೀತಾರ ಪತಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ನಿಧನರಾಗಿದ್ದಾರೆ.ಇವರು ಪತ್ನಿ ಮತ್ತು ಪುಟ್ಟ ಮಗನನ್ನು ಅಗಲಿದ್ದಾರೆ.