ಬೆಂಗಳೂರು: ‘ದಿ ರಾಮೇಶ್ವರಂ ಕೆಫೆ’ಯಲ್ಲಿನ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾದ ಮುಸಾವಿರ್ ಹುಸೇನ್ ಶಾಜಿಬ್ ಹಾಗೂ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅವರನ್ನು ಹತ್ತು ದಿನಗಳ ಕಾಲ ಎನ್ಐಎ ವಶಕ್ಕೆ ಒಪ್ಪಿಸಿ ನಗರದ ಎನ್ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಇಬ್ಬರೂ ಆರೋಪಿಗಳನ್ನು ಗುರುವಾರ (ಏ.12) ರಾತ್ರಿ ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಬಂಧಿಸಿದ್ದ ಎನ್ಐಎ ತನಿಖಾಧಿಕಾರಿಗಳು ಶನಿವಾರ ಬೆಳಗ್ಗೆ 11.30ಕ್ಕೆ ನಗರದ ಎನ್ಜಿವಿ ಕಾಂಪ್ಲೆಕ್ಸ್ನಲ್ಲಿರುವ ಎನ್ಐಎ ವಿಶೇಷ ಕೋರ್ಟ್ನ ಉಸ್ತುವಾರಿ ನ್ಯಾಯಾಧೀಶ ಸಿ.ಬಿ.ಸಂತೋಷ್ ಅವರ ಗೃಹ ಕಚೇರಿಯಲ್ಲಿ ಹಾಜರುಪಡಿಸಲಾಯಿತು.
ಎನ್ಐಎ ಪರ ಹಾಜರಾಗಿದ್ದ ವಕೀಲ ಪಿ. ಪ್ರಸನ್ನಕುಮಾರ್, ‘ಆರೋಪಿಗಳನ್ನು ಕೋಲ್ಕತ್ತಾ ಮಹಾನಗರಕ್ಕೆ ಹೊಂದಿಕೊಂಡ ಪೂರ್ವ ಮೇದಿನಿಪುರ ಜಿಲ್ಲೆಯ ಹೋಟೆಲ್ ವೊಂದರಲ್ಲಿ ಗುರುವಾರ (ಏ.11) ರಾತ್ರಿ ವೇಳೆ ಎನ್ಐಎ ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಇವರ ವಿರುದ್ಧ ಗುರುತರ ಆರೋಪಗಳಿದ್ದು ಹೆಚ್ಚಿನ ವಿಚಾರಣೆಗಾಗಿ ಎನ್ಐಎ ವಶಕ್ಕೆ ಒಪ್ಪಿಸಲು ಆದೇಶಿಸಬೇಕು’ ಎಂದು ಕೋರಿದರು.
ಸುಮಾರು ಒಂದು ಗಂಟೆ ಎನ್ಐಎ ಪರ ಪ್ರಾಸಿಕ್ಯೂಷನ್ ವಾದ ಆಲಿಸಿದ ನ್ಯಾಯಾಧೀಶರು ಇಬ್ಬರೂ ಆರೋಪಿಗಳನ್ನು 10 ದಿನಗಳ ಕಾಲ ಎನ್ಐಎ ವಶಕ್ಕೆ ಒಪ್ಪಿಸಿ ಆದೇಶಿಸಿದರು.
‘ಆರೋಪಿಗಳ ಬಂಧನದ ಬಗ್ಗೆ ಅವರ ಕುಟುಂಬ ವರ್ಗದವರಿಗೆ ಶುಕ್ರವಾರವೇ ಮಾಹಿತಿ ನೀಡಲಾಗಿತ್ತು. ಇಂದು ಅವರ ಪರವಾಗಿ ಕುಟುಂಬದ ಯಾವುದೇ ಸದ್ಯರಾಗಲೀ ಅಥವಾ ಅವರನ್ನು ಪ್ರತಿನಿಧಿಸುವ ವಕೀಲರಾಗಲೀ ವಿಚಾರಣೆ ವೇಳೆ ಹಾಜರಾಗಿರಲಿಲ್ಲ’ ಎಂದು ತಿಳಿಸಿದ್ದಾರೆ.