ಬೆಳಗಾವಿಯ ಅಧಿವೇಶನದಲ್ಲಿ “ಅತ್ಯಾಚಾರವನ್ನು ತಡೆಯಲು ಆಗದಿರುವ ಪರಿಸ್ಥಿತಿಯಲ್ಲಿ ಮಲಗಿ ಅದನ್ನು ಆನಂದಿಸಬೇಕು” ಎಂದು ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದೆ.
ರಾಜ್ಯದಲ್ಲಿ ಮಳೆಯಿಂದಾದ ಹಾನಿಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಅತಿವೃಷ್ಟಿ ಕುರಿತು ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಜೆ 5ರ ವೇಳೆ ಚರ್ಚೆಗೆ ಹೆಚ್ಚಿನ ಸಮಯಬೇಕು ಎಂದು ಸದಸ್ಯರು ವಿನಂತಿಸಿದ್ದರು. ಆಗ ಸಂಜೆ 6 ಗಂಟೆಯವರೆಗೆ ಸಮಯ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದ್ದರು.
ಸದಸ್ಯರು ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಕೇಳಿದರು. ಸರ್ಕಾರ ಉತ್ತರ ನೀಡಲು ಸಿದ್ಧವಾಗಿದ್ದರೂ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲು ಪಟ್ಟು ಹಿಡಿದರು. ಸದನದಲ್ಲಿ ಈ ಪರಿಸ್ಥಿತಿಯಾದರೆ ನಾನು ಏನು ಮಾಡಲು ಆಗುವುದಿಲ್ಲ. ಪರಿಸ್ಥಿತಿಯನ್ನು ಆನಂದಿಸಬೇಕು. ನಿಯಂತ್ರಣದಲ್ಲಿಟ್ಟು, ವ್ಯವಸ್ಥಿತವಾಗಿ ತೆಗೆದುಕೊಂಡು ಹೋಗಬೇಕು. ಸದನವು ಸುಗಮವಾಗಿ ನಡೆಸಬೇಕು ಎಂಬುದಷ್ಟೇ ಉದ್ದೇಶ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್, ನಿಮ್ಮ ಪರಿಸ್ಥಿತಿ ನೋಡಿದರೆ ಒಂದು ವ್ಯಾಖ್ಯಾನ ನೆನಪಿಗೆ ಬರುತ್ತದೆ. ”ದೇರ್ ಈಸ್ ಎ ಸೇಯಿಂಗ್ ಇನ್ ಇಂಗ್ಲಿಷ್, ವ್ಹೆನ್ ರೇಪ್ ಈಸ್ ಇನ್ನೆವಿಟಬಲ್ ಲೆಟ್ಸ್ ಲೇ ಡೌನ್ ಆಯಂಡ್ ಎಂಜಾಯ್ ಇಟ್. ದಾಟ್ಸ್ ದಿ ಪೊಸಿಷನ್ ಹಿಯರ್ ನೌ” (ಅತ್ಯಾಚಾರವನ್ನು ತಡೆಯಲು ಆಗದಿದ್ದರೆ ಮಲಗಿ ಅದನ್ನು ಆನಂದಿಸಬೇಕು) ಎನ್ನುವಂತಾಗಿದೆ ಎಂದು ನಗುತ್ತಲೇ ಹೇಳಿದರು.
ಸದ್ಯ ರಮೇಶ್ ಕುಮಾರ್ ಈ ಹೇಳಿಕೆ ಜನಾಕ್ರೋಶಕ್ಕೆ ಕಾರಣವಾಗಿದೆ. ಇಂದು ಜನ ರಮೇಶ್ ಕುಮಾರ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.