ಬೆಂಗಳೂರು; ರೀಲ್ಸ್ ಶೋಕಿಗೆ ಲಾಂಗ್ ಹಿಡಿದ ರಜತ್ ಹಾಗೂ ವಿನಯ್ ಗೌಡ ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಬಿಗ್ ಬಾಸ್ ಮಾಜಿ ಸ್ಪರ್ಧಿಗಳನ್ನು ಬಂಧಿಸಿದ ಪೊಲೀಸರು ಎಫ್ಐಆರ್ ಹಾಕಿ ರೀಲ್ಸ್ ಮಾಡಿದ ಒರಿಜಿನಲ್ ಮಚ್ಚು ತಂದು ಕೊಡಲು ಹೇಳಿದರು. ಆದರೆ ಫೈಬರ್ ಮಚ್ಚು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿರೋದು ದೊಡ್ಡ ತಪ್ಪಾಗಿದೆ. ಪೊಲೀಸರ ತನಿಖೆಯಲ್ಲಿ ಸಿಕ್ಕಿಬಿದ್ದಿರುವ ವಿನಯ್, ರಜತ್ ಜೈಲು ಪಾಲಾಗಿದ್ದಾರೆ.
ಪರಪ್ಪನ ಅಗ್ರಹಾರ ಜೈಲು ಸೇರಿರುವ ಬಿಗ್ ಬಾಸ್ ಸ್ಟಾರ್ಸ್ಗೆ ಇವತ್ತು ನಿಜಕ್ಕೂ ಅಗ್ನಿ ಪರೀಕ್ಷೆ ಕಾದಿದೆ. ನಿನ್ನೆ ರಾತ್ರಿ 24ನೇ ಎಸಿಜೆಎಂ ನ್ಯಾಯಾಧೀಶರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದ್ದಾರೆ. ಇಂದು ಬೆಳಗ್ಗೆ ಮತ್ತೆ ಪೊಲೀಸರು ಆರೋಪಿಗಳನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.ರಜತ್, ವಿನಯ್ ರೀಲ್ಸ್ ಮಾಡಿದ ಮಚ್ಚು ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬಸವೇಶ್ವರನಗರ ಪೊಲೀಸರು ಇಂದು ವಿನಯ್, ರಜತ್ ಇಬ್ಬರನ್ನು ಒಂದು ವಾರಗಳ ಕಾಲ ಕಸ್ಟಡಿಗೆ ಒಪ್ಪಿಸುವಂತೆ ಕೇಳಲಿದ್ದಾರೆ. ಈ ಮಧ್ಯೆ ಆರೋಪಿ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ಇಂದೇ ವಿಚಾರಣೆ ನಡೆಯುವ ಸಾಧ್ಯತೆ ಇದೆ. ರಜತ್ ಕೊಟ್ಟ ಮಚ್ಚು ಹಿಡಿದ ವಿನಯ್ ಗೌಡಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇದೇ ರೀಲ್ಸ್ನಲ್ಲಿ ವಿನಯ್ ಗೌಡ ಹುಲಿ ಉಗುರು ಮಾದರಿಯ ಪೆಂಡೆಂಟ್ ಧರಿಸಿದ್ದಾರೆ. ವಿನಯ್ ಗೌಡ ಅವರ ಬಂಧನದ ಬಳಿಕ ಈ ಹುಲಿ ಉಗುರು ಪೆಂಡೆಂಟ್ ಅಸಲಿಯಾ ನಕಲಿಯಾ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ರೀಲ್ಸ್ನಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರೋ ವಿನಯ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಒಂದು ವೇಳೆ ವಿನಯ್ ಗೌಡ ಅವರು ಧರಿಸಿರೋ ಪೆಂಡೆಂಟ್ ಅಸಲಿ ಹುಲಿ ಉಗುರಾದ್ರೆ ಮತ್ತೊಂದು ಕೇಸ್ ಫಿಕ್ಸ್ ಆಗಲಿದೆ. ಪೊಲೀಸರ ಜೊತೆ ಅರಣ್ಯ ಇಲಾಖೆಯೂ ಈ ರೀಲ್ಸ್ ಕೇಸ್ಗೆ ಎಂಟ್ರಿ ಆಗುವ ಸಾಧ್ಯತೆ ಹೆಚ್ಚಾಗಿದೆ.