ಉಡುಪಿ: ನಿರಂತರ ಮಳೆ, ನೆರೆಯಿಂದ ಒಂದು ತಿಂಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 200 ಕೋ.ರೂ.ಗೂಅಧಿಕ ಮೌಲ್ಯದ ಮೂಲಸೌಕರ್ಯ ನಾಶವಾಗಿದ್ದು, ಉಭಯ ಜಿಲ್ಲೆಗಳ ಶಾಸಕರು ವಿಶೇಷ ಅನುದಾನಕ್ಕಾಗಿ ಸರಕಾರದ ಮೇಲೆ ಒತ್ತಡ ಹೇರಬೇಕಿದೆ.
ಪ್ರಸ್ತುತ ಎನ್ಡಿಆರ್ಎಫ್, ಎಸ್ಡಿಆಎಫ್ ಮಾರ್ಗಸೂಚಿಯ ಅನ್ವಯ ಪರಿಹಾರವನ್ನು ನೀಡಲಾಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಇಲ್ಲ. ಜು. 12ರಂದು ಉಭಯ ಜಿಲ್ಲೆಗಳಿಗೆ ತಲಾ 5 ಕೋ.ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಇದು ಯಾವುದಕ್ಕೂ ಸಾಕಾಗುತ್ತಿಲ್ಲ.
ಜಿಲ್ಲಾ ವಿಪತ್ತು ನಿರ್ವಹಣ ನಿಧಿಯಲ್ಲೂ ಹೇಳಿಕೊಳ್ಳುವಷ್ಟು ಇಲ್ಲ. ಉಡುಪಿ ಜಿಲ್ಲೆಯಲ್ಲಿ 5.43 ಕೋ.ರೂ., ದಕ್ಷಿಣ ಕನ್ನಡದಲ್ಲಿ 14.87 ಕೋ.ರೂ. ಲಭ್ಯವಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಅನು ದಾನಕ್ಕಾಗಿ ಉಭಯ ಜಿಲ್ಲೆಗಳಿಂದಲೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರವು ತುರ್ತು ಮೂಲಸೌಕರ್ಯ ಕಲ್ಪಿಸಲು ಇಡೀ ರಾಜ್ಯಕ್ಕೆ 500 ಕೋ.ರೂ. ಘೋಷಿಸಿದೆ. ಇದರಲ್ಲಿ ಉಭಯ ಜಿಲ್ಲೆಗಳಿಗೆ ಎಷ್ಟು ಎಂಬುದು ಖಚಿತವಾಗಿಲ್ಲ.
ಕೇಂದ್ರದ ಅನುದಾನಕ್ಕೂ ಆಗ್ರಹ ಉಭಯ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದ 200 ಕೋ.ರೂ.ಗಳಿಗೂ ಅಧಿಕ ಮೌಲ್ಯದ ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ. ರಾಜ್ಯ ಸರಕಾರದಿಂದ ಜಿಲ್ಲೆಗೆ ತಲಾ 5 ಕೋ.ರೂ. ಬಿಡುಗಡೆ ಮಾಡಲಾ ಗಿದೆ. ಮೂಲಸೌಕರ್ಯ ಒದಗಿ ಸುವ ನಿಟ್ಟಿ ನಲ್ಲಿ ತುರ್ತು ಕಾಮಗಾರಿಗೆ ಕೋಟ್ಯಂತರ ರೂಪಾಯಿ ಅನು ದಾನದ ಆವಶ್ಯಕತೆಯಿದ್ದು, ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಕೇಂದ್ರ ಸರಕಾರದಿಂದ ಕರಾವಳಿ ಜಿಲ್ಲೆಗಳಿಗೆ ಮಳೆ ಹಾನಿ ತುರ್ತು ಕಾಮಗಾರಿಗಳಿಗಾಗಿ ಶೀಘ್ರ ಅನುದಾನ ತೆಗೆದುಕೊಂಡು ಬರುವ ಪ್ರಯತ್ನ ಮಾಡಬೇಕು ಎಂಬ ಆಗ್ರಹವೂ ಜನರಿಂದ ಕೇಳಿಬರುತ್ತಿದೆ.