ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿ ದಿಕ್ಕು ಬದಲಾವಣೆ ಮಾಡಿಕೊಂಡ ಪರಿಣಾಮ ಬೆಳ್ತಂಗಡಿ ತಾಲೂಕಿನ ಉಜಿರೆ, ಚಾರ್ಮಾಡಿ, ಮುಂಡಾಜೆ, ಬೆಳ್ತಂಗಡಿ, ಧರ್ಮಸ್ಥಳ, ಕಲ್ಮಂಜ, ನಿಡ್ಲೆ, ಕಳೆಂಜ, ಬೆಳಾಲು, ಕಣಿಯೂರು ಸೇರಿದಂತೆ ಇತರೆಡೆ ಇಂದು ಮುಂಜಾನೆ 3.30ರಿಂದ 4 ಗಂಟೆವರೆಗೆ ಅಕಾಲಿಕ ಮಳೆ ಸುರಿದಿದೆ.
ಕೃಷಿಕರಿಗೆ ಮತ್ತೆ ಮಳೆ ಕಂಟಕವಾಗಿ ಪರಿಣಮಿಸಿದ್ದು, ರಾತ್ರಿಯೇ ಏಕಾಏಕಿ ಮಳೆ ಸುರಿದಿದ್ದರಿಂದ ಕೆಲವೆಡೆ ಒಣಹಾಕಿದ ಅಡಿಕೆಗಳು ಒದ್ದೆಯಾಗಿದೆ. ಹಾಗೆಯೆ ಗೇರು ಬೀಜ ಕೃಷಿಯ ಫಸಲಿಗೂ ಈ ಮಳೆ ದೊಡ್ಡ ಹೊಡೆತವನ್ನು ನೀಡಿದೆ.
ರಾತ್ರಿ ಸುಮಾರು ಅರ್ಧತಾಸು ಉತ್ತಮ ಮಳೆಯಾಗಿದ್ದು, 8 ಗಂಟೆವರೆಗೂ ಹನಿ ಮಳೆ ಸುರಿದಿದೆ. ಸಂಪೂರ್ಣ ಮೋಡಕವಿದ ವಾತಾವರಣದಿಂದ ಕೂಡಿದೆ. ಇನ್ನು ಎರಡು ಮೂರು ದಿನ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.