ಪುತ್ತೂರು: ಧಿಗಿಣ ವೀರ , ಖ್ಯಾತ ಪುಂಡು ವೇಷಧಾರಿ, ಯಕ್ಷರಂಗದ ಸಿಡಿಲಮರಿ ಖ್ಯಾತಿಯ ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಡಾ. ಶ್ರೀಧರ್ ಭಂಡಾರಿ (73 ವ) ಅವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.
ರಂಗಸ್ಥಳದಲ್ಲಿ ಚುರುಕಿನ, ವೇಗದ ನಡೆಯಿಂದ ಅವರಿಗೆ ಸಿಡಿಲಮರಿ ಎಂಬ ಬಿರುದು ಪಡೆದಿದ್ದ ಡಾ. ಶ್ರೀಧರ್ ಭಂಡಾರಿಯವರ ಅಭಿಮನ್ಯು ಪಾತ್ರ ಭಾರಿ ಪ್ರಸಿದ್ಧಿ ಪಡೆದಿತ್ತು. ಒಮ್ಮೆಗೆ 200ರಿಂದ 250ರಷ್ಟು ಧೀಂಗಿಣ ಹಾಕುತ್ತಿದ್ದ ಶ್ರೀಧರ ಭಂಡಾರಿ ಅವರು ಬಭ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ ಮುಂತಾದ ಪಾತ್ರಗಳಲ್ಲಿ ಸೈ ಎನಿಸಿದ್ದರು.
ಕೇರಳದ ಎರ್ನಾಕುಲಂ ನಲ್ಲಿ ಕೃಷ್ಣ ವೇಷಕ್ಕೆ ಗೆಜ್ಜೆ ಕಟ್ಟುವ ಮೂಲಕ ಯಕ್ಷಗಾನ ಕ್ಷೇತ್ರಕ್ಕೆ ಶ್ರೀಧರ ಭಂಡಾರಿ ಅವರು ಪಾದಾರ್ಪಣೆ ಮಾಡಿದ್ದರು. 1963ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಿಕೊಂಡ ಇವರು, 1980ರಲ್ಲಿ ಈ ಮೇಳದಿಂದ ಹೊರಗೆ ಬಂದು ಪುತ್ತೂರು ಮೇಳ ಮತ್ತು ಕಾಂತಾವರ ಮೇಳವನ್ನು ಆರಂಭಿಸಿದರು. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ನಂತರ ಧರ್ಮಸ್ಥಳ ಮೇಳಕ್ಕೆ ವಾಪಾಸ್ ಸೇರಿಕೊಂಡರು.
ಶ್ರೀಧರ ಭಂಡಾರಿಯವರು ತಮ್ಮ 62 ನೆಯ ವಯಸ್ಸಿನಲ್ಲಿ ಹಿಂದಿಯ ಜೀ ವಾಹಿನಿಯ ‘ಶಭಾಶ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ 3 ನಿಮಿಷಗಳಲ್ಲಿ 148 ಧೀಂಗಿಣಗಳನ್ನು ಹೊಡೆದು ದಾಖಲೆ ನಿರ್ಮಿಸಿದ್ದರು.
ಯಕ್ಷಗಾನ ಸೇವೆಗಾಗಿ ಪುತ್ತೂರು ಶ್ರೀಧರ ಭಂಡಾರಿಯವರಿಗೆ ಅಮೇರಿಕಾದ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ಗೌರವಕ್ಕೆ ವಿಶ್ವದಾದ್ಯಂತ ಆಯ್ಕೆಯಾದ ಕೇವಲ 35 ಜನರಲ್ಲಿ ಪುತ್ತೂರು ಶ್ರೀಧರ ಭಂಡಾರಿ ಓರ್ವರು. ಇದರೊಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷ ಕೌಸ್ತುಭ, ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಪೇಜಾವರ, ಎಡನೀರು ಮಠ ಪ್ರಶಸ್ತಿ ಹೀಗೆ ಅನೇಕ ಪ್ರತಿಷ್ಠಿತ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿದೆ.
ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಅನಿಲ ಹಾಗೂ ಪುತ್ರ ದೇವಿ ಪ್ರಕಾಶರನ್ನು ಅಗಲಿದ್ದಾರೆ.