ಮಂಗಳೂರು: ರ್ಯಾಗಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲರ ಮೇಲೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಸುರತ್ಕಲ್ ಬಳಿಯ ಮುಕ್ಕದ ಖಾಸಗಿ ಕಾಲೇಜೊಂದರಲ್ಲಿ ನಡೆದಿದೆ.
ಹಲ್ಲೆ ನಡೆಸಿದ ಮಹಮ್ಮದ್ ಬಾಝಿಲ್, ಸಂಭ್ರಮ್ ಆಳ್ವ, ಸಮೀಲ್, ಅಶ್ವಿನ್ ಎಸ್. ಜಾನ್ಸನ್ ಎಂಬ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿರುವ ಬಗ್ಗೆ ಕಿರಿಯ ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಅದರಂತೆ ನಾಲ್ವರು ವಿದ್ಯಾರ್ಥಿಗಳನ್ನು ಕರೆದ ಪ್ರಾಂಶುಪಾಲರು ಬುದ್ಧಿಮಾತು ಹೇಳಿದ್ದಲ್ಲದೆ, ಇದನ್ನು ಹೀಗೆ ಮುಂದುವರಿಸಿದರೆ ಕಾಲೇಜಿನಿಂದ ಹೊರ ಹಾಕುವುದಾಗಿ ಎಚ್ಚರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಪ್ರಾಂಶುಪಾಲರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ಬೆಳವಣಿಗೆಯಿಂದ ಪ್ರಾಂಶುಪಾಲರೇ ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಹಲ್ಲೆ ಮಾಡಿದ ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಇದು ಮೂರನೇ ರ್ಯಾಗಿಂಗ್ ಪ್ರಕರಣ ವರದಿಯಾಗಿದೆ. ನಗರದ ಕಾಲೇಜುಗಳಲ್ಲಿ ರ್ಯಾಗಿಂಗ್ ಪ್ರಕರಣ ಹೆಚ್ಚುತ್ತಿರುವುದು ಹೊರ ಜಿಲ್ಲೆ, ರಾಜ್ಯದ ಪಾಲಕರು ಆತಂಕ ಪಡುವಂತಾಗಿದೆ. ಈ ಹಿಂದೆ ವಳಚ್ಚಿಲ್ ಹಾಗೂ ದೇರಳಕಟ್ಟೆಯಲ್ಲಿ ರ್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿತ್ತು.