ಬೆಂಗಳೂರು: ನಾಲ್ಕು ದಿನದ ಹಿಂದೆ ಕಂದಾಯ ಸಚಿವ ಆರ್.ಅಶೋಕ್ ನಡೆಸಿದ್ದ ಸಭೆಯಲ್ಲಿ ಭಾಗಿಯಾಗಿದ್ದ, ಮಹಿಳಾ ವೈದ್ಯರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಸಭೆ ನಡೆಸಿದ್ದ ಸಚಿವ ಆರ್ ಅಶೋಕ್ ಹಾಗೂ ಸಂಸದ ತೇಜಸ್ವಿ ಸೂರ್ಯಗೆ ಆತಂಕ ಎದುರಾಗಿದೆ.
ಸದ್ಯ ಬೆಂಗಳೂರು ಕೋವಿಡ್ ಜವಾಬ್ದಾರಿ ಹೊತ್ತಿದ್ದ ಸಚಿವ ಆರ್.ಅಶೋಕ್ ಜೂ.27ರಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದ ಅಶೋಕ್ ಆಹಾರ ಪೂರೈಕೆಯಲ್ಲಿ ಸಮಸ್ಯೆ ಕೇಳಿ ಬಂದ ಕುರಿತು ಅಡುಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಸ್ವತಃ ಊಟವನ್ನೂ ಮಾಡಿ ರುಚಿ ನೋಡಿದ್ದರು. ನಂತರ ಬೆಂಗಳೂರು ಮೆಡಿಕಲ್ ಕಾಲೇಜು ಡೀನ್ ಹಾಗೂ ವೈದ್ಯರ ಜತೆ ಸಭೆ ನಡೆಸಿದ್ದಾರೆ.
ಆ ಸಭೆಯಲ್ಲಿದ್ದ ಮಹಿಳಾ ವೈದ್ಯರೊಬ್ಬರಿಗೆ ಇದೀಗ ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಇವರು ಕ್ವಾರಂಟೈನ್ ಆಗಬೇಕು ಎನ್ನುವ ವಾದ ಕೇಳಿಬಂದಿದೆ. ಸಚಿವ ಅಶೋಕ್ ನಡೆಸಿದ್ದ ಸಭೆಯಲ್ಲಿದ್ದ ವೈದ್ಯೆಗೆ ಕೊರೊನಾ: ಸಚಿವ ಅಶೋಕ್ ಜತೆ ಸಂಸದ ತೇಜಸ್ವಿ ಸೂರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಶಾಸಕ ಜಮೀರ್ ಅಹಮದ್ ಕೂಡ ಇದ್ದರು.
ಇವರೆಲ್ಲರಿಗೂ ಇದೀಗ ಭೀತಿ ಎದುರಾಗಿದೆ. ಆದರೆ ಇವರ್ಯಾರು ಕೋವಿಡ್ ಮಾರ್ಗಸೂಚಿಯಂತೆ ಕ್ವಾರಂಟೈನ್ ಗೆ ಒಳಪಡದೆ ನಾವು ಸಭೆ ಮಾಡುವಾಗ ಎಲ್ಲಾ ಮುಂಜಗ್ರತಾ ಕ್ರಮ ತೆಗೆದುಕೊಂಡಿದ್ದೆವು. ಹಾಗಾಗಿ ಯಾರೂ ಕ್ವಾರಂಟೈನ್ ಆಗುವ ಅಗತ್ಯವಿಲ್ಲ ಎಂದು ಪತ್ರ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ಜನ ಸಾಮಾನ್ಯರಾಗಿದ್ದರೆ ಕ್ವಾರಂಟೈನ್ ಮಾಡಲಾಗುತ್ತಿತ್ತು. ಆದರೆ, ಈ ನಾಯಕರಿಗೆ ಯಾಕೆ ಕ್ವಾರಂಟೈನ್ ಮಾಡಿಲ್ಲ ಎನ್ನುವ ಪ್ರಶ್ನೆ ಎದುರಾಗಿದೆ.