Monday, May 6, 2024
Homeಕರಾವಳಿತಾಲೂಕು ಅಧಿಕಾರಿಗಳ ತ್ರೈಮಾಸಿಕ ಸಭೆ;ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ನೀಡಿದ ಖಡಕ್ ಸೂಚನೆಗಳೇನು ಗೊತ್ತೇ?

ತಾಲೂಕು ಅಧಿಕಾರಿಗಳ ತ್ರೈಮಾಸಿಕ ಸಭೆ;ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ನೀಡಿದ ಖಡಕ್ ಸೂಚನೆಗಳೇನು ಗೊತ್ತೇ?

spot_img
- Advertisement -
- Advertisement -

ಬಂಟ್ವಾಳ : ಕಾನೂನು ಮುಂದಿಟ್ಟುಕೊಂಡು ಜನರಿಗೆ ಅನ್ಯಾಯ ಮಾಡುವುದು ಸರಿಯಲ್ಲ, ಗರಿಷ್ಠ ಪ್ರಮಾಣದಲ್ಲಿ ಜನರಿಗೆ ನೆರವಾಗುವ ರೀತಿಯಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳು ಕೆಲಸ ಮಾಡಿ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ತಾಲೂಕಿನ ಅಧಿಕಾರಿಗಳ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಕಾನೂನು ನೆಪದಲ್ಲಿ ತಾಲೂಕಿನ ಬಡವರಿಗೆ ಅನ್ಯಾಯ ಆಗಬಾರದು, ತಾಲೂಕಿನ ಜನತೆಗೆ ಸರ್ಕಾರದ ಸವಲತ್ತುಗಳು ಸಿಗಬೇಕು ಎಂಬುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದ್ದಾರೆ.

ಒಟ್ಟು ತಾಲ್ಲೂಕಿನಲ್ಲಿ 7860 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಪ್ರಸ್ತುತ 364 ಕೋವಿಡ್ ಪ್ರಕರಣಗಳು ಆಕ್ಟೀವ್ ಇದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ದೀಪಾ ಪ್ರಭು ಮಾಹಿತಿ ನೀಡಿದರು.

ಬಂಟ್ವಾಳ ಪುರಸಭಾ ವ್ಯಾಪ್ತಿ, ನೆಟ್ಲಮುಡ್ನೂರು, ವಾಮದಪದವು ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಜಾಸ್ತಿ ಇದೆ, ಅ ಭಾಗದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್ ಟೆಸ್ಟ್ ಹಾಗೂ ಲಸಿಕೆ ಹಾಕುವ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಿ ಎಂದು ಶಾಸಕರು ತಿಳಿಸಿದರು.

ತೋಟಗಾರಿಕಾ ಇಲಾಖೆಯ ವತಿಯಿಂದ ತೆಂಗು ಬೆಳಗಾರರ ಅಭಿವೃದ್ದಿಗೆ ಗಮನ ಹರಿಸಿ ರೂಪಿಸಿದ ಯೋಜನೆಯಾದ ನೀರಾ ತಯಾರಿಕ ಘಟಕದಲ್ಲಿ ನೀರಾ ಉತ್ಪಾದನೆ ಆರಂಭವಾದರೆ
ತೆಂಗು ಬೆಳೆಗಾರರಿಗೆ ಆರ್ಥಿಕ ವ್ಯವಸ್ಥೆ ಉತ್ತಮವಾಗಲು ಅನುಕೂಲ ಮಾಡಿಕೊಡುತ್ತದೆ.ಈ ನಿಟ್ಟಿನಲ್ಲಿ
ಇಲಾಖಾ ನಿಯಮಗಳನ್ನು ಸಡಿಲಿಕೆಗೊಳಿಸಿ ನೀರಾ ಉತ್ಪಾದನೆ ಮಾಡಲು ಅವಕಾಶ ನೀಡಿ ಎಂದು ಶಾಸಕರ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಅನಗತ್ಯ ಕಾರಣಗಳನ್ನು ನೀಡಿ ಕೃಷಿಕರಿಗೆ ತೊಂದರೆ ಮಾಡಬೇಡಿ ಎಂದು ಹೇಳಿದರು.
ತಾಲೂಕಿನ 109 ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಮಾಡಿಲಾಗಿದೆ.
ಇನ್ನೂ ಸುಮಾರು 20 ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಚಟುವಟಿಕೆ ಆರಂಭವಾಗಿದೆ ಮುಂಗಾರು ಮಳೆಯನ್ನು ಉಪಯೋಗ ಮಾಡಿಕೊಂಡು ಪ್ರಥಮ ಅವಧಿಯಲ್ಲಿ ಒಟ್ಟು 125 ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಮಾಡಿದಂತೆ ಅಗುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ಪಡಿತರ ಕಾರ್ಡ್ ವಿತರಣೆ ಮಾಡಲು ಸರಕಾರದ ಪೋರ್ಟಲ್ ಓಪನ್ ಆಗಿಲ್ಲವಾದ್ದರಿಂದ ಸಾಧ್ಯವಾಗುತ್ತಿಲ್ಲ, 1070 ಬಿಪಿಎಲ್, ಹಾಗೂ 1169 ಎಪಿಎಲ್ ಪಡಿತರ ಕಾರ್ಡ್ ಗಳು ಫಲಾನುಭವಿಗಳಿಗೆ ನೀಡಲು ಬಾಕಿಯಿದೆ ಎಂದು ತಹಶಿಲ್ದಾರ್ ಮಾಹಿತಿ ನೀಡಿದರು.

ಹೊಸ ಪಡಿತರ ಕಾರ್ಡ್ ಗೆ ಅರ್ಜಿ ಹಾಕಿದವರಿಗೂ ಪಡಿತರ ಕಾರ್ಡ್ ನೀಡಬೇಕು ಎಂದು ಶಾಸಕರು ತಹಶಿಲ್ದಾರ್ ರವರಿಗೆ ಸೂಚಿಸಿದರು.

ಕೆಲವೊಂದು ಬಿಪಿಎಲ್ ಪಡಿತರ ಕಾರ್ಡ್ ದಾರರು ಸರ್ಕಾರಕ್ಕೆ ಇನ್ ಕಮ್ ಟ್ಯಾಕ್ಸ್ ಕಟ್ಟಿ ಸಾಲ ಮಾಡಿದ್ದಾರೆ ಎಂಬ ಕಾರಣಕ್ಕೆ ಬಿಪಿಎಲ್ ಪಡಿತರ ಕಾರ್ಡ್ ವ್ಯವಸ್ಥೆಯಿಂದ ಅವರನ್ನು ಎ.ಪಿ.ಎಲ್ ಪಡಿತರ ಕಾರ್ಡ್ ಗೆ ಬದಲಾವಣೆ ಮಾಡುವ ವೇಳೆ ಸರಿಯಾಗಿ ಪರಿಗಣಿಸಿ ಬಿ.ಪಿ.ಎಲ್‌ ಕಾರ್ಡ್ ಕ್ಯಾನ್ಸಲ್ ಮಾಡಬೇಕು, ಬಡವರು ಅನಿವಾರ್ಯ ಪರಿಸ್ಥಿತಿಯಲ್ಲಿ ಸಾಲ ಮಾಡಿರಬಹುದು ಅಂತವರಿಗೆ ಅನ್ಯಾಯವಾಗಬಾರದು ಹಾಗಾಗಿ ಸರಿಯಾಗಿ ತಿಳಿದುಕೊಂಡು ಮಾಡಿ ಎಂದು ಅವರು ಹೇಳಿದರು.

ಬಂಟ್ವಾಳ ತಾಲೂಕಿನ ಲ್ಲಿ ಒಟ್ಟು170 ಶಿಕ್ಷಕರ ಹುದ್ದೆ ಖಾಲಿಯಿದ್ದು ಉತ್ತಮ ಶಿಕ್ಷಣದ ಉದ್ದೇಶಕ್ಕಾಗಿ ಶಿಕ್ಷಕರ ನೇಮಕದ ವಿಚಾರವನ್ನು ಶಾಸಕರ ಗಮನಕ್ಕೆ ಬಿ.ಒ.ತಂದಿದ್ದು, ಖಾಸಗಿ ಶಾಲೆಗಳಿಂದ ಈ ಬಾರಿ ಅನೇಕ ವಿದ್ಯಾರ್ಥಿಗಳು ಸರಕಾರಿ ಶಾಲೆಯತ್ತ ಮುಖಮಾಡಿದ್ದಾರೆ. ಈಗಾಗಲೇ ಸರಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಳವಾಗಿರುವ ವಿಚಾರ ಶಾಸಕರ ಗಮನಕ್ಕೆ ತಂದರು. ಜೊತೆಗೆ ಖಾಸಗಿ ಶಾಲೆಗಳು ಮಕ್ಕಳಿಗೆ ಶಾಲಾ ದಾಖಲಾತಿ ಶುಲ್ಕವನ್ನು ನೀಡುವಂತೆ ಶಿಕ್ಷಣ ಸಂಸ್ಥೆಗಳು ಒತ್ತಾಯ ಮಾಡುತ್ತಿದ್ದಾರೆ ಎಂಬ ದೂರುಗಳು ಶಾಲಾ ಮಕ್ಕಳ ಪೋಷಕರಿಂದ ಕೇಳಿ ಬರುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು.

ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂಬ ದೃಷ್ಟಿಯಿಂದ ಸರಕಾರಿ ಶಾಲೆಗಳಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಬಗ್ಗೆ ಕ್ಷೇತ್ರದಲ್ಲಿ ಶಿಕ್ಷಣಾಧಿಕಾರಿ ಹೆಚ್ಚಿನ ಒತ್ತು ನೀಡಿ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ಕೆಲಸ ಮಾಡಿ ಎಂದರು.

ಬಿಸಿರೋಡು ಜಕ್ರಿಬೆಟ್ಟು ಮಧ್ಯೆ ನೆಡಲಾಗಿರುವ ಗಿಡಗಳಿಗೆ ಹಾಕಿರುವ ಟ್ರೀ ಗಾರ್ಡ್ ಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ಶಾಸಕರು ಅರಣ್ಯ ಅಧಿಕಾರಿಗಳ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಅಧಿಕಾರಿಗಳ ನಾವು ಅರಣ್ಯ ಇಲಾಖೆಯಿಂದ ಹಾಕಿಲ್ಲ ಅದು ಲಯನ್ಸ್ ನವರು ಅಳವಡಿಸಿದ್ದಾರೆ ಎಂದರು.ಕೇವಲ ಪ್ರಚಾರದ ಉದ್ದೇಶದಿಂದ ಯಾರು ಗಿಡ ನೆಡುವುದು ಬೇಡ, ಅಂತಹ ಗಾರ್ಡ್ ಗಳನ್ನು ಹಾಕುವುದಾದರೆ ಅದನ್ನು ಹಾಕುವುದೇ ಬೇಡ ಎಂದು ಸ್ಪಷ್ಟವಾಗಿ ತಿಳಿಸಿದರು.

ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹ ಮಾಡಿದ ಕಸಗಳನ್ನು ಬಂಟ್ವಾಳ ಶಾಸಕರ ಕೃಷಿ ಜಮೀನಿಗೆ ಕಳೆದ ಮೂರು ತಿಂಗಳಿನಿಂದ ಡಂಪ್ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆ ನಿರಂತರವಾಗಿ ಇರುತ್ತದೆ ಅಥವಾ ಬೇರೆ ವ್ಯವಸ್ಥೆ ಮಾಡಲು ಮುಂದಾಗುತ್ತೀರಾ ಎಂದು ಪುರಸಭಾ ಮುಖ್ಯಾಧಿಕಾರಿ ಅವರನ್ನು ಪ್ರಶ್ನಿಸಿದರು.

ಕಂಚಿನಡ್ಕ ಪದವು ಡಂಪಿಂಗ್ ಯಾರ್ಡ್ ನಲ್ಲಿ ಹಸಿ ಕಸ ವಿಲೇವಾರಿಗೆ ಶೀಘ್ರ ವ್ಯವಸ್ಥೆ ಕಲ್ಪಿಸಿ ಎಂದು ಸೂಚನೆ ನೀಡಿದರು.ಸ್ವಚ್ಚ ಭಾರತ್ ಕಲ್ಪನೆಯ ಬಳಿಕ ರಸ್ತೆ ಬದಿಯಲ್ಲಿ ಕಸ ಬಿಸಾಡುವುದು ಜಾಸ್ತಿಯಾಗಿದ್ದು ಕಂಡು ಬರುತ್ತಿದೆ, ಏನಿದು ಡಸ್ಟ್ ಬಿನ್ ಅಂದುಕೊಂಡಿದ್ದೀರಾ? ಅಧಿಕಾರಿಗಳು ಏನು ಕೈಕಟ್ಟಿ ಕುಳಿತ್ತಿದ್ದೀರಾ, ಕಣ್ಣು ಕಾಣುವುದಿಲ್ಲವೋ ನಿಮಗೆ ಎಂದು ಕೇಳಿದರು.

ಬೇರೆ ತಾಲೂಕಿನ ಕಸ ತಂದು ಬಂಟ್ವಾಳದ ವಿವಿಧ ಕಡೆಗಳಲ್ಲಿ ರಸ್ತೆ ಬದಿಗೆ ತಂದು ಹಾಕುವುದರ ಬಗ್ಗೆ ಯಾಕೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.ಸ್ವಚ್ಚತೆಗೆ ಸರಕಾರ ಇಷ್ಟು ಖರ್ಚು ಮಾಡಿದರು ಇಲಾಖೆ ಯಾಕೆ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪೋಲೀಸ್ ಇಲಾಖೆಯ ಸಹಕಾರದಿಂದ ಪುರಸಭಾ ಅಧಿಕಾರಿಗಳು ಕಸ ಬಿಸಾಡುವವರ ಮೇಲೆ ಕಾನೂನು ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

ಕಂದಾಯ ಇಲಾಖಾ ಫೈಲುಗಳು ಹೊರಗಡೆ ಜೆರಾಕ್ಸ್ ಗಾಗಿ ಕೊಂಡು ಹೋಗಲಾಗುತ್ತಿದೆ ಇದು ಕ್ರಮ ಸರಿಯಲ್ಲ, ಫೈಲುಗಳು ನಾಪತ್ತೆಯಾಗುವ ಸಾಧ್ಯತೆಗಳು ಹೆಚ್ಚು ಹಾಗಾಗಿ ಕಂದಾಯ ಇಲಾಖೆಯಲ್ಲಿ ಯೇ ಜೆರಾಕ್ಸ್ ಮೆಷಿನ್ ಅಳವಡಿಸಲು ನಾಮನಿರ್ದೇಶನ ಸದಸ್ಯ ಆನಂದ ಶಂಭೂರು ಅವರ ಮನವಿಗೆ ಉತ್ತರಿಸಿದ ತಹಶಿಲ್ದಾರ್ ರಶ್ಮಿ ಎಸ್. ಆರ್ ಅವರು ಈಗಾಗಲೇ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು ಮೆಷಿನ್ ಅಳವಡಿಸಲಾಗಿದೆ. ನಾಳೆಯಿಂದ ಫೈಲುಗಳು ಕಂದಾಯ ಇಲಾಖೆಯಿಂದ ಜೆರಾಕ್ಸ್ ಉದ್ದೇಶದಿಂದ ಹೊರಗಡೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ನಾಮನಿರ್ದೇಶನ ಸದಸ್ಯರಾದ ಆನಂದ ಶಂಭೂರು, ಯಶವಂತ ನಾಯ್ಕ, ಭಾರತಿ ಚೌಟ, ಜೊಕಿಂ ಮಿನೇಜಸ್, ಚಂದ್ರಶೇಖರ ಶೆಟ್ಟಿ , ತಹಶಿಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!