ಕಲ್ಲಡ್ಕ: ಬಿಸಿರೋಡು ಅಡ್ಡಹೊಳೆಯವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭಗೊಂಡಿದ್ದು, ಕಾಮಗಾರಿ ವೇಳೆ ರಸ್ತೆಯಲ್ಲಿ ಧೂಳಿನ ಸಮಸ್ಯೆಯಿಂದ ಸಂಚಾರ ಮಾಡಲು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬರುತ್ತಿದೆ.
ಬಿಸಿರೋಡಿನಿಂದ ಉಪ್ಪಿನಂಗಡಿವರೆಗೆ ಕೆ.ಎನ್.ಆರ್.ಸಿ ಕಂಪೆನಿ ಈ ಗುತ್ತಿಗೆ ವಹಿಸಿಕೊಂಡಿದ್ದು ಕಾಮಗಾರಿ ನಡೆಸುವ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಚತುಷ್ಪಥ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಹಳೆಯ ಡಾಮಾರು ರಸ್ತೆಯನ್ನು ಅಗೆದು ತೆಗೆಯಲಾಗಿದೆ.
ಅದರಲ್ಲೂ ಕಲ್ಲಡ್ಕ ಪೇಟೆಯಲ್ಲಿ ಪೈಓವರ್ ಕಾಮಗಾರಿ ಭರದಿಂದ ನಡೆಸಲಾಗುತ್ತಿದೆ. ಈ ರಸ್ತೆಯನ್ನು ಸಂಪೂರ್ಣ ಅಗೆದು ತೆಗೆಯಲಾಗಿದ್ದು ಸಂಚಾರಕ್ಕೆ ಬದಲಿ ಸರ್ವೀಸ್ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಸಂಚಾರಕ್ಕೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ ಕಂಪೆನಿ ಕೆಲವು ಕಡೆಗಳಲ್ಲಿ ಡಾಮಾರು ಹಾಕದೆ ಕಾಂಕ್ರೀಟ್ ಮಿಶ್ರಿತ ಜಲ್ಲಿ ಕಲ್ಲುಗಳನ್ನು ಬಳಸಿ ರಸ್ತೆ ನಿರ್ಮಾಣ ಮಾಡಿದೆ.
ಆದರೆ ಕಾಂಕ್ರೀಟ್ ಮಿಶ್ರಿತ ಜಲ್ಲಿ ಕಲ್ಲುಗಳನ್ನು ಬಳಸಲಾಗಿರುವ ರಸ್ತೆಯಲ್ಲಿ ಧೂಳು ಹೊಗೆಯ ರೀತಿಯಲ್ಲಿ ಹರಡುವುದರಿಂದ ಸಂಚಾರ ಬಲು ದುಸ್ತರವಾಗಿಬಿಟ್ಟಿದೆ.