ಪುತ್ತೂರು: ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಉದ್ಯಮಿಯೊಬ್ಬರು ಮೃತಪಟ್ಟ ಘಟನೆ ಇಂದು ಪುತ್ತೂರು ಅಜ್ಜಿಕಲ್ಲು ಎಂಬಲ್ಲಿ ನಡೆದಿದೆ.
ಅಜ್ಜಿಕಲ್ಲು ನಿವಾಸಿ ಬಾಬು ಪೂಜಾರಿ ಅವರ ಪುತ್ರ ರವೀಂದ್ರ ಪೂಜಾರಿ (34) ವಿದ್ಯುತ್ ಪ್ರವಹಿಸಿ ಮೃತಪಟ್ಟವರು. ಇವರು ಮಂಗಳೂರು ಬಿಜೈಯಲ್ಲಿ ಇನ್ಫೋಟೆಕ್ ಎಂಬ ಕಂಪ್ಯೂಟರ್ ಹಾರ್ಡ್ ವೆರ್ ಸಂಬಂಧಿತ ಸ್ವಂತಃ ಉದ್ಯಮ ನಡೆಸುತ್ತಿದ್ದರು.
ಕ್ರಿಸ್ ಮಸ್ ರಜಾ ಅವಧಿಯಲ್ಲಿ ಅಜ್ಜಿಕಲ್ಲು ಮನೆಗೆ ಬಂದವರು ಮನೆಯ ತೋಟದಲ್ಲಿ ಅಡಿಕೆ ಮರ ಏರಿ ಕೊಕ್ಕೆಯ ಮೂಲಕ ಅಡಿಕೆ ಕೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ಎಚ್.ಟಿ ಲೈನ್ ಗೆ ತಾಗಿ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿದ್ದಾರೆ. ಮೃತದೇಹ ಇಡಲಾಗಿದ್ದ ಪುತ್ತೂರು ಸರಕಾರಿ ಆಸ್ಪತ್ರೆಗೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.
ಮೃತರು ತಂದೆ ತಾಯಿ, ತಿಂಗಳಾಡಿಯ ತೆಗ್ಗು ಬಳಿಯ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿ, ಒಂದು ವರ್ಷದ ಮಗು, ಸಹೋದರ ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ಚಂದ್ರಶೇಖರ್ ಹಾಗು ಓರ್ವ ಸಹೋದರಿಯನ್ನು ಅಗಲಿದ್ದಾರೆ.